ಚಿಕ್ಕೋಡಿ: ` ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರೆಲ್ಲರೂ ತಮ್ಮ ಹೊಲಗಳಲ್ಲಿ ಒಡ್ಡುಗಳನ್ನು ಹಾಕಿ ಓಡುವ ನೀರನ್ನು ನಿಲ್ಲಿಸಿ, ನಿಂತಿರುವ ನೀರನ್ನು ಇಂಗಿಸಿ ಭೂಮಿ ಫಲವತ್ತತೆ ಹೆಚ್ಚಿಸಲು ಮುಂದಾಗಬೇಕು' ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೃಷಿ ಯೋಜನಾಧಿಕಾರಿಗಳಾದ ನಿಂಗಪ್ಪ ಜಿ. ಹೇಳಿದರು.
ತಾಲ್ಲೂಕಿನ ಧುಳಗನವಾಡಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ಜಲಾನಯನ ಅಭಿವೃದ್ಧಿ ಕುರಿತ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಹೊಲಗಳಿಗೆ ಒಡ್ಡು ಹಾಕುವುದು, ಕೃಷಿ ಗುಂಡಿ, ಮಳೆ ನೀರು ಸಂಗ್ರಹಣೆ ಮಾಡುವದು ಮೊದಲಾದ ಜಲ ಸಂರಕ್ಷಣಾ ಯೋಜನೆಗಳಿಗೆ ಆರ್ಥಿಕ ನೆರವು ನೀಡಲಿದೆ. ಪ್ರಗತಿ ಬಂಧು ಸ್ವಸಹಾಯ ಗುಂಪಿನ ಸದಸ್ಯೆಯರು ಈ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದರು.
ದುಂಡಪ್ಪಾ ಜೋಡಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಸೇವಕ ಶಿವಾನಂದ ಕಮತೆ ಬಿತ್ತನೆ ಬೀಜಗಳ ಬಗ್ಗೆ ಮಾಹಿತಿ ನೀಡಿದರು. ರಾಮಣ್ಣಾ ಖೋತ, ಭರತ ಕಲಾಚಂದ್ರ ಮಾತನಾಡಿದರು. ಸುಜಾತಾ ಮಗದುಮ್ಮ ಸ್ವಾಗತಿಸಿದರು. ಶ್ರಿದೇವಿ ಕಾಂಬಳೆ ನಿರೂಪಿಸಿದರು. ಮಂಗಲ ಪಾಟೀಲ ವಂದಿಸಿದರು.