ಕೆಜಿಎಫ್: ಬೇಸಿಗೆ ವೇಳೆಗೆ ನಗರದಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರೂ.4 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದು ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಎಸ್.ಎನ್.ಕೃಷ್ಣಯ್ಯಶೆಟ್ಟಿ ಹೇಳಿದರು.
ಬೇತಮಂಗಲದ ನೀರು ಸಂಗ್ರಹಾಲಯಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ಬೇತಮಂಗಲ ಜಲಾಶಯವನ್ನು ಈಗ ಆಧುನಿಕರಣಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕಾಗಿ 45 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಗ್ರಹಾಲಯದ ಫಿಲ್ಟರ್ ಬೆಡ್ ದುರಸ್ತಿ ಹಾಗೂ ಹೊಸ ಕೊಳವೆ ಬಾವಿಗಳನ್ನು ಕೊರೆಯಲಾಗುವುದು. ನೀರಿನ ಸುಗಮ ಸರಬರಾಜಿಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೂಡಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೇತಮಂಗಲ ಕೆರೆ ಒತ್ತುವರಿ ಕುರಿತು ವರದಿ ತಯಾರಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಒತ್ತುವರಿಯಲ್ಲಿ ತೊಡಗಿರುವವರನ್ನು ಈಗಾಗಲೇ ಗುರುತಿಸಲಾಗಿದೆ ಎಂದರು.
ನೀರು ಸಾಮರ್ಥ್ಯ ಹೆಚ್ಚಲು ಮುಂದಿನ ಬೇಸಿಗೆಯಲ್ಲಿ ಕೆರೆಯ ಹೂಳು ತೆಗೆಯಲಾಗುವುದು ಎಂದು ಕೃಷ್ಣಯ್ಯ ಶೆಟ್ಟಿ ಹೇಳಿದರು.ಮಂಡಳಿಯ ಮುಖ್ಯ ಎಂಜಿನಿಯರ್ ರವೀಂದ್ರಭಟ್ಟ, ಎಂಜಿನಿಯರ್ ರಂಗಧಾಮಯ್ಯ, ತಾಂತ್ರಿಕ ಸಹಾಯಕ ನಾಗೇಶ್, ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ್, ರಘುನಾಥಶೆಟ್ಟಿ, ಮುಖಂಡರಾದ ಕೆ.ರಾಜೇಂದ್ರನ್, ಸುರೇಶ್ ನಾರಾಯಣ್, ಪ್ರೇಮ್, ಸತ್ಯನಾರಾಯಣ ಮುಂತಾದವರು ಹಾಜರಿದ್ದರು.