ಮಲೇಬೆನ್ನೂರು: ಸಮೀಪದ ಭಾನುವಳ್ಳಿ ಗ್ರಾಮಸ್ಥರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಕುಡಿಯುವ ನೀರು ಹಾಗೂ ಮೂಲಸೌಲಭ್ಯಕ್ಕೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ನೀರು ಪೂರೈಸುವ ಕೊಳವೆಮಾರ್ಗಕ್ಕೆ ಅಕ್ರಮ ಹಾಗೂ ಅನಧಿಕೃತ ಸಂಪರ್ಕ, ಮೋಟರ್ ಅಳವಡಿಸಿಕೊಂಡ ಕಾರಣ ಕೆಲವೇ ಮನೆಗಳಿಗೆ ನೀರು ಸರಬರಾಜಾಗುತ್ತಿದೆ.
ಕೂಲಿ ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದ ಜನತೆ ಕೊಡ ಹಿಡಿದು ಊರೆಲ್ಲಾ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆಗೆ ಗ್ರಾಮಾಡಳಿತ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸ್ಪಂದಿಸುತ್ತಿಲ್ಲ ಎಂದು ಪ್ರದರ್ಶನಕಾರರು ದೂರಿದರು. ಧರಣಿ ವಿಷಯ ತಿಳಿದರೂ ಗ್ರಾ.ಪಂ. ಪದಾಧಿಕಾರಿಗಳು, ಪಿಡಿಒ ಕೂಡ ಸಮಸ್ಯೆ ಆಲಿಸಲು ಸ್ಥಳದಲ್ಲಿ ಇಲ್ಲ. ಪೊಲೀಸರನ್ನು ನಿಯೋಜಿಸಿದ್ದಾರೆ ಎಂದು ರೈತ ಸಂಘದ ಓಂಕಾರಪ್ಪ, ಶಂಭುಲಿಂಗಪ್ಪ, ಕೊಟ್ರೇಶ್ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪತಿ ಮಧ್ಯೆ ಪ್ರವೇಶಿಸಿ ಹೇಳಿಕೆ ನೀಡಲು ಯತ್ನಿಸಿದರು. ಸಮಸ್ಯೆ ಪರಿಹರಿಸಲು ನಿಮಗೆ ಅಧಿಕಾರ ಯಾರು ಕೊಟ್ಟಿದ್ದಾರೆ? ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ತಾ.ಪಂ. ಇಒ ಕರೆಸಿ, ಗ್ರಾಮ ಪಂಚಾಯ್ತಿ ಸೂಪರ್ಸೀಡ್ ಮಾಡಿ ಎಂದು ಧರಣಿ ಮುಂದುವರಿಸಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮುಖಂಡರನ್ನು ಅಧ್ಯಕ್ಷರ ಕೊಠಡಿಗೆ ಕರೆಸಿ ಸಂಧಾನ ಆರಂಭಿಸಿದರು. ಕುಬೇರಗೌಡ, ಎಂ.ಎಸ್. ನಾಗರಾಜ್, ಶಿವಕುಮಾರ್, ವೀರಪ್ಪಸ್ವಾಮಿ, ರುದ್ರಯ್ಯ, ಕಾಳಮ್ಮ, ಗಂಗಮ್ಮ, ಪಾರಮ್ಮ, ಲಕ್ಷ್ಮವ್ವ, ಗುಲಾಬ್ಜಾನ್, ಸಲೇಹಾ, ಅಕ್ತರ್ಬೀ, ಹಿರಿಯಮ್ಮ, ಮಮ್ತಾಜ್, ಷಹತಾಜ್, ರೂಪಾ, ರೇಷ್ಮಾಬಾನು, ಷಹತಾಜ್ ಬೇಗ್, ಹನುಮಕ್ಕ, ಮಂಜಪ್ಪ ಪಾಲ್ಗೊಂಡಿದ್ದರು.