ಕೃಷ್ಣಾನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಬಚಾವತ್ ಆಯೋಗದ ತೀರ್ಪಿನ ಪ್ರಕಾರ 2000 ಇಸವಿ ಒಳಗೆ 734 ಟಿಎಂಸಿ ನೀರನ್ನು ರಾಜ್ಯವು ಉಪಯೋಗಿಸಿಕೊಳ್ಳಬೇಕಿತ್ತು. ಆದರೆ ಅಷ್ಟು ಪ್ರಮಾಣದ ನೀರನ್ನು ಉಪಯೋಗಿಸಿಕೊಂಡಿಲ್ಲ.
ಆ ಆಯೋಗದ ಪ್ರಕಾರ ಹೆಚ್ಚುವರಿಯಾಗಿ 448 ಟಿಎಂಸಿ ಎಂದು ಪರಿಗಣಿಸಿ, ರಾಜ್ಯಕ್ಕೆ 224 ಟಿಎಂಸಿ ನೀರನ್ನು ಹಂಚಿಕೆ ಮಾಡಬೇಕಾಗಿತ್ತು. ಆದರೂ ಸಹ ‘ಬಿ’ ಸ್ಕೀಮ್ನ ರಾಜ್ಯದ ನೀರಿನ ಬೇಡಿಕೆ 275 ಟಿಎಂಸಿ ಆಗಿತ್ತು. ಈಗ ಹಂಚಿಕೆ ಮಾಡಿರುವುದು 177 ಟಿಎಂಸಿ.
ಇದು ರಾಜ್ಯದ ಬೇಡಿಕೆಗಿಂತಲೂ 98 ಟಿಎಂಸಿ ಕಡಿಮೆ. ಇದಕ್ಕೆ ಕಾರಣ ಏನೆಂದರೆ ನಿಗದಿತ ಪ್ರಮಾಣದ 734 ಟಿಎಂಸಿ ನೀರನ್ನು ರಾಜ್ಯವು 2000 ಇಸವಿಯೊಳಗೆ ಬಳಸಿಕೊಂಡಿಲ್ಲದಿರುವುದು. ಇದೇ ನ್ಯಾಯಮಂಡಳಿಯು ರಾಜ್ಯಕ್ಕೆ ಈಗ ಬಾರಿಸಿದ ಎಚ್ಚರಿಕೆ ಗಂಟೆ.
ಇನ್ನು ಮೇಲಾದರೂ, ಎಚ್ಚೆತ್ತು ಹಂಚಿಕೆ ಮಾಡಲಾಗಿರುವ 911 ಟಿಎಂಸಿ ನೀರನ್ನು ಪೂರ್ಣವಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಗಮನಹರಿಸಿ, ರಾಜ್ಯದ ಜಲಸಂಪನ್ಮೂಲವು ನಮ್ಮ ಜನತೆ ಮತ್ತು ರೈತರಿಗೆ ಸಿಗುವಂತೆ ಮಾಡಲಿ.