ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೆಕಾಯಿ ಬೆಳೆದು ಹಿಗ್ಗಿದ ರೈತ

Last Updated 3 ಡಿಸೆಂಬರ್ 2013, 10:35 IST
ಅಕ್ಷರ ಗಾತ್ರ

ಯಾದಗಿರಿ: ‘ನಮ್ದು ಕೆನಾಲಿನ ಕೊನಿ ಭಾಗದಾಗಿನ ಹೊಲ. ಶೇಂಗಾ, ಜ್ವಾಳಾ, ಹೆಸರು ಬೆಳದ ಕೆನಾಲ್‌ ನೀರಿಗೆ ಕಾಯಕೊಂತ ಕುಂಡರಬೇಕು. ಒಂದೆರಡ ವರ್ಷ ನೀರು ಸಿಗಲಿಲ್ಲ, ಬೆಳಿನೂ ಬರಲಿಲ್ಲ. ಕೈಯಾಗಿನ ರೊಕ್ಕ ಖಾಲಿ ಆದೂರಿ. ಏನ್‌ ಮಾಡೋದು ಅಂತ ವಿಚಾರ ಮಾಡ್ಲಾಕತ್ತಿದೆ. ರಾಯಚೂರಿನ ನಮ್ಮ ಸಂಬಂಧಿಕರು ನುಗ್ಗಿಕಾಯಿ ಬೆಳ್ಯಾಕ ಹೇಳಿದ್ರು, ಈಗ ನೋಡ್ರಿ, ಎರಡ ವರ್ಷದ ಗಿಡ ಆಗ್ಯಾವ. ಎಕರೆಗೆ ಒಂದ ಲಕ್ಷ ರೂಪಾಯಿ ಲಾಭನೂ ಬಂದೈತಿ’

–ಶಹಾಪುರ ತಾಲ್ಲೂಕಿನ ಕೊಂಕಲ್‌ ಗ್ರಾಮದ ರೈತ ಚಂದ್ರಶೇಖರ ಕೋದಂಡ ಅವರ ಮಾತುಗಳಿವು. ನುಗ್ಗೆಕಾಯಿ ಬೆಳೆದು ಹಿಗ್ಗು ಅನುಭವಿ ಸುತ್ತಿರುವ ಈ ರೈತ, ಸುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ. ಕಾಲುವೆ ಕೊನೆ ಯಂಚಿನ ರೈತರಿಗೆ ಹೊಸ ಆಶಾಕಿರಣ ವಾಗಿ ಹೊರಹೊಮ್ಮಿದ್ದಾರೆ.

ಹೈದರಾಬಾದ್‌ ಕರ್ನಾಟಕ ಪ್ರದೇಶ ಬಿಸಿಲು ನಾಡು ಎಂದೇ ಖ್ಯಾತವಾ ಗಿದೆ. ಅದರಲ್ಲೂ ಬಯಲು ಭೂಮಿ ಯಲ್ಲಿ ಮಳೆಯನ್ನೇ ನಂಬಿ ಕೃಷಿ ಮಾಡಬೇ ಕಾದ ಸ್ಥಿತಿ ಇದೆ. ಜಿಲ್ಲೆಯಲ್ಲಿ ನಾರಾಯಣಪುರ ಎಡ ದಂಡೆ ಕಾಲುವೆ ಜಾಲವಿದ್ದರೂ, ಕಾಲುವೆಯ ಕೊನೆಯ ಭಾಗದ ರೈತರಿಗೆ ಮಾತ್ರ ಕಣ್ಣೀರು ತಪ್ಪುವುದಿಲ್ಲ. ಕಾಲುವೆಯ ನೀರಿಗಾಗಿ ಕಾಯ್ದು, ಬೆಳೆ ಕಳೆದುಕೊಂಡ ರೈತರ ಸಂಖ್ಯೆಯೇ ಹೆಚ್ಚು. ಇಂತಹ ಪ್ರದೇಶ ದಲ್ಲಿ ಕೇವಲ ಕೊಳವೆಬಾವಿ ನೀರನ್ನೇ ಬಳಸಿ, ನುಗ್ಗೆಕಾಯಿ ಗಿಡಗಳನ್ನು ಬೆಳೆದಿರುವ ಚಂದ್ರಶೇಖರ ಕೋದಂಡ, ಬಿಸಿಲು ನಾಡಿನಲ್ಲೂ ಲಾಭದಾಯಕ ಬೇಸಾಯ ಮಾಡ ಬಹುದು ಎಂಬು ದನ್ನು ತೋರಿಸಿಕೊಟ್ಟಿದ್ದಾರೆ.

ಮೊದಲು ಎಲ್ಲರಂತೆ ಚಂದ್ರಶೇಖರ ಕೂಡ, ಶೇಂಗಾ, ಜೋಳ, ಹೆಸರು ಬೆಳೆ ಬೆಳೆಯು ತ್ತಿದ್ದರು. ಇರುವ ಕೊಳವೆ ಬಾವಿಯಿಂದ ನೀರು ಹಾಯಿ ಸುವುದು ಸಾಧ್ಯವಾಗುತ್ತಿರಲಿಲ್ಲ. ಕಾಲುವೆಯ ನೀರು ಬರುವುದನ್ನೇ ಕಾಯುತ್ತ ಕುಳಿತುಕೊಳ್ಳಬೇಕಾಗಿತ್ತು. ಕೆಲವೊಮ್ಮೆ ನೀರು ಸಿಗದೇ ಬೆಳೆ ಹಾಳಾಗಿ ಹೋಗಿದ್ದೂ ಇದೆ. ಇದೆಲ್ಲದರಿಂದ ರೋಸಿ ಹೋದ ಚಂದ್ರಶೇಖರ ಅವರಿಗೆ ಆಸರೆಯಾ ಗಿದ್ದು ರಾಯಚೂರಿನ ಲ್ಲಿರುವ ಅವರ ಸಂಬಂಧಿಕರ ಸಲಹೆ.

ಮೂರು ಬೆಳೆ: ನುಗ್ಗೆಕಾಯಿ ಗಿಡಗ ಳಿಂದ ವರ್ಷದಲ್ಲಿ ಮೂರು ಬಾರಿ ಕಾಯಿಗಳನ್ನು ಕಟಾವು ಮಾಡಲಾಗು ತ್ತದೆ. ಪ್ರತಿಬಾರಿ ಕಾಯಿಗಳನ್ನು ಹರಿದ ನಂತರ ಗಿಡಗಳಿಗೆ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ನೀಡುವು ದರ ಜೊತೆಗೆ ಅಗತ್ಯ ಪ್ರಮಾ ಣದ ನೀರನ್ನೂ ಹರಿಸಲಾಗುತ್ತದೆ. ಇದರಿಂದ ನುಗ್ಗೆಕಾಯಿ ಗಿಡಗಳು ಮತ್ತೊಮ್ಮೆ ಕಾಯಿ ಕೊಡಲು ಸಿದ್ಧವಾಗುತ್ತವೆ.

‘ಎರಡ ವರ್ಷದ ಹಿಂದ ನುಗ್ಗಿಕಾಯಿ ಗಿಡ ಹಚ್ಚಿದ್ವಿ. ಒಂದು ಎಕರೆದ ಮ್ಯಾಲ ಒಂದಿಷ್ಟ ಜಮೀನಿನ್ಯಾಗ ನುಗ್ಗಿ ಗಿಡಾ ಬೆಳಿಸೇನಿ. ಹ್ವಾದ ವರ್ಷ ಒಂದ ಎಕರೆದಾಗ ಎಲ್ಲ ಖರ್ಚ ತಗದ ಒಂದ ಲಕ್ಷ ರೂಪಾಯಿ ಲಾಭ ಬಂದೈತಿ. ಗಿಡ ಹಚ್ಚುವಾಗಿ 40 ಸಾವಿರ ರೂಪಾಯಿ ಖರ್ಚ ಮಾಡಿದ್ದೆ. ಈಗ ಬರೀ ಕೊಟ್ಟಿಗಿ ಗೊಬ್ಬರ, ಹಸಿರೆಲೆ ಗೊಬ್ಬರ ಹಾಕ್ತೇನಿ. ಬೊರ್‌ವೆಲ್‌ ನಿಂದ ಪೈಪ್‌ಲೈನ್‌ ಮಾಡಿ ಕೊಂಡೇವಿ. ಹಿಂಗಾಗಿ ನುಗ್ಗಿ ಗಿಡಕ್ಕೆ ಎಷ್ಟ ಬೇಕೋ ಅಷ್ಟ ನೀರ ಹಾಕ್ತೇನಿ. ಇದರಿಂದ ಬೋರಿನ ನೀರೂ ಸಾಕಾಗತೈತಿ. ಮ್ಯಾಲ ಕೆನಾಲ್‌ ನೀರಿಗೆ ಕಾಯೋದು ತಪ್ಪೇತಿ’ ಎನ್ನು ತ್ತಾರೆ ಚಂದ್ರಶೇಖರ ಕೋದಂಡ.

‘ನುಗ್ಗಿ ಗಿಡದಾಗ ವರ್ಷಕ್ಕ ಮೂರ ಸರ್ತಿ ಕಾಯಿ ಹರಿಬಹುದ್ರಿ. ಕಾಯಿಗೆ ಈ ಭಾಳ ರೇಟ್‌ ಐತಿ. ನಮ್ಮ ಹೊಲ ದಾಗಿನ ನುಗ್ಗಿಕಾಯಿ ಶಹಾಪುರ ಪ್ಯಾಟ್ಯಾಗ ಖರ್ಚ ಆಗಿ ಬಿಡ್ತಾವ. ಹಿಂಗಾಗಿ ಮಾರ್ಕೆಟಿನ ತೊಂದ್ರಿ ಆಗಿಲ್ಲ. ಪಕ್ಕದಾಗ ಶಹಾಪುರ ಇರೋದ್ರಿಂದ ನುಗ್ಗಿ ಕಾಯಿ ತಗೊಂಡ ಹೋಗಾಕ ಖರ್ಚು ಜಾಸ್ತಿ ಬರುದುಲ್ಲ’ ಎಂದು ಹೇಳುತ್ತಾರೆ. ‘ಒಮ್ಮೆ ನುಗ್ಗಿ ಕಾಯಿ ಗಿಡ ಹಚ್ಚಿದ್ರ, ಮೂರ ವರ್ಷ ಬರ್‍ತಾವ್ರಿ. ವರ್ಷಕ್ಕೆ ಮೂರ ಬರೇದಂತ ಮೂರ ವರ್ಷ ದಾಗ ಒಂಬತ್ತ ಬರೇ ನುಗ್ಗಿ ಕಾಯಿ ಕಿಳತೇವಿ. ಈಗ ಒಂದೂವರಿ ವರ್ಷ ಆಗೇತಿ. ಹ್ವಾದ ವರ್ಷ ಎರಡ ಸರ್ತಿ ನುಗ್ಗಿ ಕಾಯಿ ಮಾರಾಟ ಮಾಡೇನಿ’ ಎನ್ನುತ್ತಾರೆ.

’ಒಂದು ಎಕರೆ ನುಗ್ಗೆ ಕಾಯಿ ಗಿಡಗಳಿಗೆ ಪ್ರತಿ ವರ್ಷ ₨ 25 ಸಾವಿರ ಮೊತ್ತದ ಕ್ರಿಮಿನಾಶಕ ಸಿಂಪರಣೆ ಮಾಡಲಾ ಗುತ್ತದೆ. ಜೊತೆಗೆ ಒಂದಿಷ್ಟು ಖರ್ಚು ಸೇರಿ ಎಕರೆಗೆ ₨40 ಸಾವಿರ ದವರೆಗೆ ವೆಚ್ಚ ಮಾಡಲಾಗುತ್ತದೆ. ಆದರೆ 3 ಬಾರಿ ಸಿಗುವ ನುಗ್ಗೆಕಾಯಿಯಿಂದ ₨ 1.5 ಲಕ್ಷ ದವರೆಗೆ ಆದಾಯ ಬರುತ್ತಿದ್ದು, ಖರ್ಚು ತೆಗೆ ದರೆ, ಒಂದು ಲಕ್ಷದವರೆಗೆ ನಿವ್ವಳ ಲಾಭವಾ ಗುತ್ತದೆ’ ಎಂದು ಚಂದ್ರಶೇಖರ ಹೇಳುತ್ತಾರೆ.

ನುಗ್ಗೆಕಾಯಿ ಬಿಡಲು ಆರಂಭವಾ ದರೆ, ಪ್ರತಿ ವಾರ 10–12 ಚೀಲ ಗಳನ್ನು ಶಹಾಪುರದ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಮದುವೆ, ಮುಂಜಿವೆ ಮತ್ತಿತರ ಕಾರ್ಯ ಕ್ರಮಗಳಿಗೆ ಬೇಕಾಗುವ ನುಗ್ಗೆಕಾಯಿ ಖರೀದಿ ಸಲು ಜನರು ನೇರವಾಗಿ ಹೊಲಕ್ಕೆ ಬರುತ್ತಾರೆ. ಒಂದು ಕೆಜಿಗೆ ₨80 ರಂತೆ ನುಗ್ಗೆ ಕಾಯಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ವರ್ಷದ 12 ತಿಂಗಳೂ ಸಿಗುವ ಬೆಳೆ ಇದಾಗಿದ್ದು, ಹೆಚ್ಚು ಇಳುವರಿಗಾಗಿ ಕ್ರಿಮಿನಾಶಕ ಸಿಂಪರಣೆ, ಗೊಬ್ಬರ ಹಾಕಲಾಗು ತ್ತಿದೆ. ಇದರಿಂದ ನುಗ್ಗೆಕಾಯಿ ಗಿಡಗಳು ಇನ್ನೂ ಒಂದು ವರ್ಷ ಹೆಚ್ಚಿಗೆ ಫಲ ನೀಡಲಿವೆ ಎನ್ನುವ ವಿಶ್ವಾಸ ಅವರದ್ದು.

8ನೇ ತರಗತಿಯವರೆಗೆ ಓದಿ ರುವ ಚಂದ್ರಶೇಖರ, ಕುಟುಂಬದ ಕೊನೆಯ ಮಗನಾಗಿದ್ದು,ತಂದೆ–ತಾಯಿ, ಇಬ್ಬರು ಮಕ್ಕಳು, ಪತ್ನಿ ಯೊಂದು ತುಂಬು ಸಂಸಾರ ನಡೆಸು ತ್ತಿದ್ದಾರೆ. ನುಗ್ಗೆಕಾಯಿ ಬೇಸಾಯ ದಿಂದ ಕುಟುಂಬದ ಆರ್ಥಿಕ ಸ್ಥಿತಿೂ ಸುಧಾರಿಸಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ರೈತರಿಗೆ ಮಾರ್ಗದರ್ಶಿ’
‘ಕೊಂಕಲ್‌ ಹಾಗೂ ಸುತ್ತಲಿನ ರೈತರು ಕೆನಾಲ್‌ ನೀರನ್ನೇ ನಂಬಿಕೊಂಡು ಕೃಷಿ ಮಾಡುತ್ತಿದ್ದೇವೆ. ನೀರು ಬರದಿದ್ದಾಗ ಹತಾಶರಾಗುತ್ತೇವೆ. ಇದನ್ನು ತಪ್ಪಿಸಲು ಚಂದ್ರಶೇಖರ ಮಾಡಿರುವ ಹೊಸ ಪ್ರಯೋಗದಂತೆ ನಾವೂ ಏನಾದರೂ ಹೊಸತನ್ನು ಮಾಡಲು ಆಸಕ್ತಿ ಹೆಚ್ಚಿದೆ. ನುಗ್ಗೆಯಂತೆ ಬೇರೆ ಬೆಳೆ ಬೆಳೆಯುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದ್ದೇವೆ’.

–ಶಿವರಾಜ ಪಾಟೀಲ, ರೈತ

‘ಸಾಧನೆ ಶ್ಲಾಘನೀಯ’
‘ನುಗ್ಗೆಕಾಯಿ ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಅಂಥದ್ದರಲ್ಲಿ ಒಂದು ಎಕರೆ ಪ್ರದೇಶದಲ್ಲಿ ನುಗ್ಗೆಕಾಯಿ ಗಿಡಗಳನ್ನು ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿರುವ ಚಂದ್ರಶೇಖರ ಕೋದಂಡ ಅವರ ಸಾಧನೆ ಶ್ಲಾಘನೀಯ. ಸರ್ಕಾರದ ಸೌಲಭ್ಯಗಳನ್ನು ದೊರಕಿಸಲು ಅಗತ್ಯ ಸಹಕಾರ ನೀಡುತ್ತೇನೆ’.

–ಹನುಮೇಗೌಡ ಮರಕಲ್‌, ಜಿ.ಪಂ. ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT