ಕೆಜಿಎಫ್: ನುಡಿ ತೇರಿನ ಮಹತ್ವವನ್ನು ಗಡಿಭಾಗದ ಜನರಿಗೆ ತಲುಪಿಸಿ ಅವರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಕೆಲಸವನ್ನು ಕನ್ನಡ ಪರ ಸಂಘಟನೆಗಳು ಮಾಡಬೇಕು ಎಂದು ಶಾಸಕ ವೈ.ಸಂಪಂಗಿ ಹೇಳಿದರು.
ಜ. 24 ರಂದು ಕೆಜಿಎಫ್ನಲ್ಲಿ ಚಾಲನೆ ಸಿಗುವ ಕನ್ನಡ ನುಡಿ ತೇರು ಕಾರ್ಯಕ್ರಮದ ಅಂಗವಾಗಿ ಸೋಮವಾರ ಊರಿಗಾಂನಲ್ಲಿ ನಡೆದ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದರು.
ಸಚಿವ ಗೋವಿಂದ ಕಾರಜೋಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವರ್ತೂರು ಪ್ರಕಾಶ್ ಸಮ್ಮೇಳನದಲ್ಲಿ ಭಾಗವಹಿಸುವುದು ನಿಶ್ಚಿತವಾಗಿದೆ. ಮುಖ್ಯಮಂತ್ರಿ ತೇರನ್ನು ಉದ್ಘಾಟಿಸುವ ಕಾರ್ಯಕ್ರಮವಿದ್ದು, ಅದಿನ್ನೂ ದೃಢಪಡಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಲ್ಲಿಕಾರ್ಜುನಯ್ಯ ಹೇಳಿದರು.
ಕಾರ್ಯಕ್ರಮಕ್ಕೆ ಕನ್ನಡ ಪರ ಹೋರಾಟ ನಡೆಸುತ್ತಿರುವ ಸಂಘ ಸಂಸ್ಥೆಗಳನ್ನು ಕಡೆಗಣಿಸಲಾಗಿದೆ ಎಂದು ಕನ್ನಡ ಹೋರಾಟಗಾರರಾದ ರಾಜಗೋಪಾಲಗೌಡ ಮತ್ತು ವಿ.ಎಸ್. ಪ್ರಕಾಶ್ ಆರೋಪಿಸಿದರು.
ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ನಡೆದ ದಿಬ್ಬಣದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ ಹೇಳಿದರು.
ಉಪವಿಭಾಗಾಧಿಕಾರಿ ಪೆದ್ದಪ್ಪಯ್ಯ, ತಹಶೀಲ್ದಾರ್ ಮಂಗಳಾ, ಪೌರಾಯುಕ್ತ ಬಾಲಚಂದ್ರ, ಡಿವೈಎಸ್ಪಿ, ಎಂ.ವಿ.ಶೇಷನ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.