ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂಕುನುಗ್ಗಲು, ಬಿರಿಯಾನಿ, ಮತಗಟ್ಟೆ ಪ್ರಚಾರ!

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಮತದಾನ
Last Updated 6 ಜನವರಿ 2014, 6:44 IST
ಅಕ್ಷರ ಗಾತ್ರ

ಕೋಲಾರ: ನೂಕುನುಗ್ಗಲು ತಡೆಯಲು ಪೊಲೀಸರು ಸಾಹಸ, ಮತಗಟ್ಟೆ ಸಮೀಪವೇ ಪ್ರಚಾರ, ಮತದಾರರಿಗೆ ಚಿಕನ್ ಬಿರಿಯಾನಿ ರುಚಿ ತೋರಿಸಿದ ಅಭ್ಯರ್ಥಿಗಳು, ಬಿರುಬಿಸಿಲಲ್ಲಿ ಹೆಚ್ಚಾದ ಮತದಾನ..

–ನಗರದ ಮಹಿಳಾ ಸಮಾಜ ಕಾಲೇ­ಜಿ­­ನಲ್ಲಿ ಭಾನುವಾರ ನಡೆದ ರಾಜ್ಯ ಒಕ್ಕ­ಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ  ಚುನಾ­ವಣೆಯ ದೃಶ್ಯಾವಳಿ­ಗಳಿವು. ಬೆಳಿಗ್ಗೆ 8­ರಿಂದ ಸಂಜೆ 4ಗಂಟೆ­ವರೆಗೆ ನಡೆದ ಮತ­ದಾನ ಸಂದರ್ಭದಲ್ಲಿ ಹಲವು ವಿಭಿನ್ನ ಸನ್ನಿವೇಶಗಳು ನಿರ್ಮಾಣವಾಗಿದ್ದವು.

ಮತದಾನ ನಡೆದ ಶಾಲೆಯ ಹೊರಗೆ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯ ನಾಲ್ಕೂ ರಸ್ತೆಗಳು ಮತದಾರರು, ಬೆಂಬ­ಲಿಗರಿಂದ ತುಂಬಿಹೋಗಿತ್ತು. ಮೂರು ಪ್ರಮುಖ ರಸ್ತೆಗಳಲ್ಲೂ ದೊಡ್ಡ ಅಭ್ಯರ್ಥಿ­ಗಳ ಪರವಾದ ಪ್ರಚಾರ ನಡೆ­ಸಲು ಪೆಂಡಾಲ್ ಗಳು ತಲೆ ಎತ್ತಿದ್ದವು. ಸಾರ್ವಜನಿಕರು ಮತ್ತು ವಾಹನಗಳ ಓಡಾ­ಟಕ್ಕೆ ಅವಕಾಶವೂ ಇರಲಿಲ್ಲ. ಆಸ್ಪ­ತ್ರೆಗೆ ಬರಬೇಕಾದವರು ಪರದಾಡಿದರು.

ನಿಯಮ ಉಲ್ಲಂಘನೆ
ಮತಗಟ್ಟೆಯ 100 ಮೀ ವ್ಯಾಪ್ತಿ­ಯಲ್ಲಿ ಪ್ರಚಾರ ನಡೆಸಬಾರದು ಎಂದು ಚುನಾವಣಾ ಅಧಿಕಾರಿಗಳ ಸೂಚನೆಗೆ ಕವಡೆ ಕಿಮ್ಮತ್ತೂ ಇರಲಿಲ್ಲ. ಅಭ್ಯರ್ಥಿ­ಗಳಾದ ಕಲ್ಲಂಡೂರು ಲೋಕೇಶ್, ವಕ್ಕ­ಲೇರಿ ರಾಮು, ಕೊಳಗಂಜನಹಳ್ಳಿ ಗೋಪಾಲ­ಕೃಷ್ಣ, ಕಲ್ಲಂಡೂರು ನಂಜುಂಡ­ಗೌಡ, ಯಲುವಳ್ಳಿ ರಮೇಶ್, ಡಾ.ಡಿ.ಕೆ.ರಮೇಶ್ ಮತ್ತು ಅವರ ಕುಟುಂಬದ ಸದಸ್ಯರು, ಬೆಂಬಲಿಗರು ಮತಗಟ್ಟೆ ಸಮೀಪದಲ್ಲೇ ನಿಂತು ಮತ­ದಾರರಿಗೆ ಕೈಮುಗಿದು ಮತಯಾಚನೆ ಮಾಡುತ್ತಿದ್ದರು.


ಹಾಗೆ ಮತಯಾಚನೆ, ಪ್ರಚಾರ ಮಾಡು­ವಂತಿಲ್ಲ ಎಂದು ಚುನಾ­ವಣಾ­ಧಿಕಾರಿ ಎಂ.ಶಿವಣ್ಣ ಸ್ಥಳಕ್ಕೆ ಬಂದು ಮತ್ತೆ ಸೂಚನೆ ನೀಡಿದರೂ ಪ್ರಚಾರ ನಡೆದೇ ಇತ್ತು. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ­ಯೂ ಪ್ರಚಾರವನ್ನು ತಡೆಯುವ ಪ್ರಯ­ತ್ನ­ವನ್ನೂ ಮಾಡಿರಲಿಲ್ಲ. ನಂತರ ಸ್ಥಳಕ್ಕೆ ನಗರ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಶಿವ­ಕುಮಾರ್ ಬಂದು ಮತಗಟ್ಟೆ ಸಮೀಪ­ದಲ್ಲಿದ್ದ ಅಭ್ಯರ್ಥಿಗಳು ಮತ್ತು ಬೆಂಬಲಿ­ಗರನ್ನು ದೂರ ಕಳಿಸಿದರು.

ನೂಕುನುಗ್ಗಲು
ಇಡೀ ಜಿಲ್ಲೆಯ ಪೈಕಿ ಕೋಲಾರ ತಾಲ್ಲೂಕು ಒಂದರಲ್ಲೇ ಅತ್ಯಂತ ಹೆಚ್ಚು ಮತದಾರರು (9354) ಇದ್ದಾರೆ. ಹೀಗಾಗಿ ಮಹಿಳಾ ಸಮಾಜ ಶಾಲೆ­ಯಲ್ಲಿ 19 ಮತಗಟ್ಟೆಗಳನ್ನು ಸ್ಥಾಪಿಸ­ಲಾ­ಗಿತ್ತು. ಎಲ್ಲ ಮತದಾರರು ಒಳಗೆ ಬರಲು ಮತ್ತು ಹೊರಹೋಗಲು ಒಂದೇ ಬಾಗಿಲು ಇದ್ದ ಪರಿಣಾಮವಾಗಿ ನೂಕು­ನುಗ್ಗಲು ಏರ್ಪಟ್ಟಿತ್ತು. ಶಾಲೆಯ ಒಳ ಆವರಣದಲ್ಲಿ ಗುಂಪು­ಗೂಡಿದ್ದವರನ್ನು ಚದುರಿಸಿ ಮತದಾರ­ರನ್ನು ಮಾತ್ರ ಮುಖ್ಯಗೇಟಿನ ಆಚೆಯೇ ನಿಲ್ಲಿಸಿ ಅಲ್ಲಿಂದಲೇ ಒಳಗೆ ಬಿಡುವ ವ್ಯವಸ್ಥೆ ಮಾಡಲು ಪೊಲೀಸರು ಮುಂದಾ­­ದರು. ಆಗ ವಿಪರೀತ ನೂಕು­ನುಗ್ಗಲು ಏರ್ಪ­ಟ್ಟಿತು. ತಳ್ಳಾಟವೂ ನಡೆ­ಯಿತು. ಪೊಲೀಸ­ರೊಂದಿಗೆ ಕೆಲವರು ವಾಗ್ವಾದ ನಡೆಸಿದರು. ಮಹಿಳೆ­ಯರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆಯನ್ನು ಮಾಡ­ಲಾಯಿತು.

ಬಿರಿಯಾನಿ ರುಚಿ
ಮತ ಹಾಕಲು ಬಂದ ಮತದಾರರಿಗೆ ಚಿಕನ್ ಬಿರಿಯಾನಿ ರುಚಿ ನೋಡುವ ಅವ­ಕಾಶವೂ ಸಿಕ್ಕಿತ್ತು.  ಅಭ್ಯರ್ಥಿಗಳಾದ ಯಲುವಳ್ಳಿ ರಮೇಶ್, ವಕ್ಕಲೇರಿ ರಾಮು ಮತ್ತು ಸದಾಶಿವರೆಡ್ಡಿ ಅವರ ಭಾವಚಿತ್ರವುಳ್ಳ ಬ್ಯಾನರ್ ಹೊಂದಿದ್ದ ಟೆಂಪೋದಲ್ಲಿದ್ದ ಮಂದಿ ಮತದಾರರಿಗೆ ಬಿರಿಯಾನಿ ಹಂಚುತ್ತಿದ್ದರು. ಆ ಸ್ಥಳದಲ್ಲಿ ನೂಕುನುಗ್ಗಲೂ ಹೆಚ್ಚಿತ್ತು. ಕಾರ್ಯ­ಕರ್ತ, ಬೆಂಬಲಿಗರಿಗೆ ಈ ಅಭ್ಯರ್ಥಿಗಳು ತಮ್ಮ ಹೆಸರುಳ್ಳ ಬಿಳಿಯ ಟೋಪಿಗಳನ್ನು ಕೂಡ ವಿತರಿಸಿದರು.  ಗ್ರಾಮೀಣ ಪ್ರದೇಶ­ಗಳಿಂದ ಮತದಾರರನ್ನು ಕರೆ­ತರಲು ಕೆಲ ಅಭ್ಯರ್ಥಿಗಳು ಉಚಿತ ವಾಹನ ವ್ಯವಸ್ಥೆ­ಯನ್ನೂ ಮಾಡಿದ್ದರು.

ಸ್ಕೆಥಾಸ್ಕೋಪ್ ಧರಿಸಿ ಪ್ರಚಾರ...
ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯ­ರಾಗಿರುವ ಡಾ.ಡಿ.ಕೆ.ರಮೇಶ್ ಅವರು ಕೊರಳಿಗೆ ಅವರ ಚುನಾವಣಾ ಗುರುತಿನ ಸ್ಟೆಥಾ­ಸ್ಕೋಪ್ ಹಾಕಿ­ಕೊಂಡೇ ಮತ­ದಾ­ರರ ಗಮನ ಸೆಳೆದರು. ಹಾಸ್ಯ ಚಟಾ­ಕಿ­ಗಳನ್ನು ಹಾರಿಸುತ್ತಲೇ ಅವರು ಮತ­ಯಾಚನೆ ಮಾಡುತ್ತಿದ್ದರು.

ರಾತ್ರಿ ಕಾರ್ಯಾಚರಣೆ...
ಚುನಾವಣೆಯ ಹಿಂದಿನ ದಿನವಾದ ಶನಿವಾರ ರಾತ್ರಿ ಕೆಲವು ಅಭ್ಯರ್ಥಿಗಳು ಮತದಾರರಿಗೆ ಹಣ ಮತ್ತು ಬೆಳ್ಳಿ ವಸ್ತುಗಳನ್ನು ವಿತರಿಸಿದರು. ಹಲವೆಡೆ ಭಾರಿ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು ಎಂದು ಕೆಲವು ಮತದಾರರು ತಿಳಿಸಿದರು.

ಅಭ್ಯರ್ಥಿಯೊಬ್ಬರು ಮತದಾರರ ಗುಂಪುಗಳನ್ನು ವಿಂಗಡಿಸಿ ತಲಾ ರೂ10–15–20 ಸಾವಿರವನ್ನು ಮುಖಂಡರಿಗೆ ನೀಡಿದ್ದರು. ಆದರೆ ಮುಖಂಡರು ಮತದಾರರಿಗೆ ಆ ಹಣವನ್ನು ವಿತರಿಸಲೇ ಇಲ್ಲ ಎಂಬ ಮಾತುಗಳೂ ಕೇಳಿಬಂದವು. ಮತ್ತೊಬ್ಬ ಅಭ್ಯರ್ಥಿಯು ಆಯ್ದ ಕೆಲವು ಮತದಾರರಿಗೆ ತಲಾ ರೂ1500 ವಿತರಿಸಿದ್ದಾರೆ ಎಂದೂ ಮತದಾರರೊಬ್ಬರು ತಿಳಿಸಿದರು. ಇನ್ನೂ ಕೆಲವು ಅಭ್ಯರ್ಥಿಗಳು ಖಾಲಿ ಕೈಯಲ್ಲೇ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT