ರಾಯಚೂರು: ನೂತನ ಪಿಂಚಣಿ ಯೋಜನೆ ಮಸೂದೆ (ಪಿಎಫ್ಆರ್ಡಿಎ)ಸಂಸತ್ನಲ್ಲಿ ಚರ್ಚೆಗೆ ಬರುವುದನ್ನು ವಿರೋಧಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು. ದೇಶದ ಸುಪ್ರೀಂಕೋರ್ಟ್ ಪಿಂಚಣಿ ಎಂಬುದು ನೌಕರರಿಗೆ ನೀಡುವ ಬಿಕ್ಷೆಯಲ್ಲ. ನೌಕರರ ದೀರ್ಘಾವಧಿಗೆ ಮಾಡಿದ ಸೇವೆ ಹಾಗೂ ಸೇವಾವಧಿಯಲ್ಲಿ ನೌಕರರು ಪಡೆದ ಜೀವನಾವಶ್ಯಕ ವೇತನಗಿಂತ ಕಡಿಮೆ ವೇತನ. ಪಿಂಚಣಿ ರೂಪದಲ್ಲಿ ಇಳಿವಯಸ್ಸಿನಲ್ಲಿ ಸಾಮಾಜಿಕ, ಆರ್ಥಿಕ ಭದ್ರತೆಗಾಗಿ ನೀಡುವಂತಹದ್ದಾಗಿದೆ ಅರ್ಥೈಸಿದೆ ಎಂದು ವಿವರಿಸಿದರು.
ನೌಕರರು ಪಿಂಚಣಿಗಾಗಿ ವೇತನದ ಪ್ರತಿ ತಿಂಗಳು ಶೇ 10ರಷ್ಟು ಹಾಗೂ ಸರ್ಕಾರಕ್ಕೆ ಅದಕ್ಕೆ ಸಮಾನವಾದ ಹಣವನ್ನು ವಂತಿಗೆಯಾಗಿ ನೀಡಲಾಗುತ್ತಿದೆ. ಈ ಹಣವನ್ನು ಫಂಡ್ ಮ್ಯಾನೇಜರ್ಗಳ ಮೂಲಕ ವಿವಿಧ ಖಾಸಗಿ ಸಂಸ್ಥೆಗಳ ಮೂಲಕ ಷೇರುಪೇಟೆಯಲ್ಲಿ ತೊಡಗಿಸಲಾಗುತ್ತಿದೆ ಅದರಿಂದ ಬಂದ ಲಾಭದಲ್ಲಿ 30ರಿಂದ 35 ವರ್ಷಗಳ ನಂತರ ಈ ಹಣವನ್ನು ಉಪಯೋಗಿಸಿದ ಕಂಪೆನಿಗಳು ನೌಕರನಿಗೆ ಪಿಂಚಣಿ ನೀಡುತ್ತಿವೆ ಎಂದು ತಿಳಿಸಿದರು.
ನೌಕರರ ಹಾಗೂ ಸರ್ಕಾರ ತೊಡಗಿಸಿದ ಹಣಕ್ಕೆ ಯಾವುದೇ ನಿರ್ದಿಷ್ಟ ಕಾನೂನು ರಚಿಸಿಲ್ಲ. ಅಲ್ಲದೇ ಭದ್ರತೆ ನೀಡದೇ ಈ ಹೊಸ ಪಿಂಚಣಿ ಯೋಜನೆಯನ್ನು ಘೋಷಿಸಲಾಗಿದೆ ಎಂದು ದೂರಿದರು.
ಹೊಸ ಪಿಂಚಣಿ ಯೋಜನೆ ವಸೂದೆ(ಪಿಎಫ್ಆರ್ಡಿಎ)ಕೇಂದ್ರ ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಎಂದು ಅಖಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯ ಘಟಕದ ಕಾರ್ಯದರ್ಶಿ ಮಹಾದೇವಪ್ಪ ಜಿಲ್ಲಾಧಿಕಾರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.
ನೌಕರರ ಒಕ್ಕೂಟದ ಪದಾಧಿಕಾರಿಗಳಾದ ಜೆ.ಎಂ ಚನ್ನಬಸಯ್ಯ, ಕೆ.ಜಿ ವೀರೇಶ, ಎಸ್.ಮಾರುತಿ, ಎಚ್.ಪದ್ಮಾ, ಕೆ.ನಾರಾಯಣ, ಸಣ್ಣತಾಯಪ್ಪ, ದೊಡ್ಡನಗೌಡ, ಸೈಯದ್ ಜಹಾಂಗೀರ ಪಾಷಾ, ಭೀಮಣ್ಣ ಉದ್ದಾಳ ಇದ್ದರು.