ವಿಜಾಪುರ: ಇಲ್ಲಿಯ ಜೋರಾಪುರ ಪೇಟೆ ಬಣಗಾರ ಗಲ್ಲಿಯ ಹಿರೇಮಠ ಹಾಗೂ ಜಮಖಂಡಿ ತಾಲ್ಲೂಕು ಹುಲ್ಯಾಳ ಯೋಗಾಶ್ರಮದ ನೂತನ ಪೀಠಾಧಿಕಾರಿ ಡಾ.ರೇಣುಕ ಸದಾಶಿವ ಶಿವಾಚಾರ್ಯ ಅವರ ಪಟ್ಟಾಧಿಕಾರ ಮಹೋತ್ಸವ ಗುರುವಾರ ಇಲ್ಲಿ ನಡೆಯಿತು.
ಈ ಮಠಗಳ ಹಿರಿಯ ಸ್ವಾಮೀಜಿ ವಿದ್ಯಾನಂದ ಶಿವಾಚಾರ್ಯ ಸಮ್ಮುಖದಲ್ಲಿ ರಂಭಾಪುರಿ ಜಗದ್ಗುರುಗಳು ನೂತನ ಪೀಠಾಧಿಕಾರಿಗೆ ಪಟ್ಟಾಧಿಕಾರ ನೆರವೇರಿಸಿದರು.
ನಂತರ ನಡೆದ ಧರ್ಮ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ರಂಭಾಪುರಿ ಜಗದ್ಗುರುಗಳು, ‘ಜೋರಾಪುರ ಹಿರೇಮಠವು ರಂಭಾಪುರಿ ಪೀಠದ ಶಾಖಾ ಮಠ. ವಿದ್ಯಾನಂದ ಶಿವಾಚಾರ್ಯ ಸ್ವಾಮೀಜಿ ಸಶಕ್ತರಾಗಿರುವಾಗಲೇ ರೇಣುಕ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಅಧಿಕಾರ ವಹಿಸಿದ್ದು ಹೆಮ್ಮೆಯ ಸಂಗತಿ. ನೂತನ ಶ್ರೀಗಳು ಈ ಭಾಗದ ಭಕ್ತ ಸಮುದಾಯಕ್ಕೆ ಧರ್ಮದ ಬೆಳಕು ಬೀರಲಿ’ ಎಂದು ಆಶೀರ್ವದಿಸಿದರು.
‘ಧರ್ಮ ಯಾವುದೇ ಇರಲಿ. ಸಮಾಜದಲ್ಲಿ ಸಾಮರಸ್ಯ ಸದ್ಭಾವನೆಗಳನ್ನು ಬೆಳೆಸಬೇಕು. ಧರ್ಮ, ಜಾತಿ, ಭಾಷೆ ಮತ್ತು ಪ್ರಾಂತದ ಹೆಸರಿನಲ್ಲಿ ಜನಾಂಗವನ್ನು ಯಾರೂ ವಿಂಗಡಿಸಬಾರದು’ ಎಂದು ಸಲಹೆ ನೀಡಿದರು.
ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಕಲಾದಗಿ ಚಂದ್ರಶೇಖರ ಶಿವಾಚಾರ್ಯರು, ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು, ಹರನಾಳದ ಮಹಾಂತೇಶ್ವರ ಶಿವಾಚಾರ್ಯರು ಮಾತನಾಡಿದರು. ವಿದ್ಯಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದ ನಂತರ ನೂತನ ಶ್ರೀಗಳ ಪಲ್ಲಕ್ಕಿ ಮಹೋತ್ಸವ ನಡೆಯಿತು.