ಅಧಿಕಾರ ಸ್ವೀಕರಿಸುತ್ತಿದ್ದಂತೆ ಅನ್ನಭಾಗ್ಯ ಘೋಷಣೆ ಮಾಡಿದ ಸಿದ್ದರಾಮಯ್ಯ ಸರ್ಕಾರದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಆದರೆ ಅವುಗಳೆಲ್ಲ ಹುಸಿಯಾಗಿವೆ. ಸಾಲು ಸಾಲು ರೈತರ ಆತ್ಮಹತ್ಯೆಗಳಾದರೂ ಒಂದಿಷ್ಟು ಪರಿಹಾರ ಕೊಟ್ಟು ಕೈತೊಳೆದುಕೊಂಡಿತು. ಪರಿಹಾರದ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿತ್ತು. ಸರಳ ಸಮಾಜವಾದಿಯಾಗಿದ್ದ ಸಿದ್ದರಾಮಯ್ಯ ವಿಲಾಸಿ ಗಾದಿ, ದಿಂಬು, ಟವಲ್ಲು, ಸೋಪು (ಈ ಯಾದಿಯಲ್ಲಿ ದುಬಾರಿ ವಾಚು ಸಹ ಸೇರುತ್ತದೆ) ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿದ್ದು ನಂಬಲಾಗದ ಸಂಗತಿ.
ಒಬ್ಬ ನೇತಾರನಿಗೆ ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂದು ಗೊತ್ತಿರಬೇಕು. (ಅವರಿಗೆ ಗೊತ್ತು ಆದರೆ ಈಗ ಬದಲಾಗಿದ್ದಾರೆ) ಮಾತನಾಡುವಾಗ ಸೂಕ್ಷ್ಮವಾಗಿರಬೇಕು. ಪ್ರಧಾನಿ ಮನ್ ಕೀ ಬಾತ್ ಗೆ ಮಂಕಿ ಬಾತ್ ಅಂತ ಹೇಳಿಕೆ ಕೊಡುವುದು ಅವರ ದಿವಾಳಿತನ ತೋರಿಸುತ್ತದೆ. ಯಾರೇ ಪ್ರಧಾನಿ ಆಗಿರಲಿ. ಅವರನ್ನು ಗೌರವ ಪೂರ್ಣವಾಗಿ ಸಂಬೋಧಿಸುವುದು ಗೌರವ. ಸಿದ್ದರಾಮಯ್ಯ ಅವರ ಸಾವಿರ ದಿನಗಳ ಆಡಳಿತದಲ್ಲಿ ಅಲ್ಲಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ ನಿಜ. ಆದರೆ ನೀರಲ್ಲಿ ಹೋಮ ಮಾಡಿದ ಹಾಗೆ ಮೂಲ ಮತ್ತು ವಲಸೆಗಳ ನಡೆವಿನ ಝಟಾಪಟಿಗಳಿಂದ ಎಲ್ಲವೂ ಗೌಣ ಎನಿಸಿ ನೆಚ್ಚಿನ ಎಮ್ಮೆ ಕೋಣ ಹಾಕಿದಂತಾಗಿದೆ.
-ಬದರಿ ಪುರೋಹಿತ್,
ಕೊಪ್ಪಳ
ಆಡಳಿತ ಮಕ್ಕಳ ಆಟವಾಗಿದೆ
ಸಿದ್ದರಾಮಯ್ಯನವರ ಆಡಳಿತ ಮಕ್ಕಳ ಆಟವಾಗಿದೆ. ಮಕ್ಕಳಿಗೆ ಆಟವಾಡಲು ಬರದಿದ್ದಾಗ ಬೇರೆ ಆಟ ಆಡುವರು. ಸಿದ್ದರಾಮಯ್ಯನವರ ಆಟವು ಅದೇ. ಐಎಎಸ್, ಐಪಿಎಸ್, ಕೆಎಎಸ್ ಮತ್ತು ಸಾಮಾನ್ಯ ಅಧಿಕಾರಿಗಳ ವರ್ಗಾವಣೆ ಹೆಚ್ಚಿದ್ದು ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ಎಗ್ಗಿಲ್ಲದೆ ನಡೆಯುತ್ತಿದೆ.
ರೈತರ ಸಾಲ ಮನ್ನಾ ವಿಷಯ ದಿಕ್ಕಪಾಲಾಗಿದ್ದು ಸಾವಿರಾರು ರೈತರು ಆತ್ಮಹತ್ಯೆಗೆ ತಲೆ ನೀಡಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ಮೇಲೆ ಅತ್ಯಾಚಾರ ತಾಂಡವಾಡುತ್ತಿದೆ.
-ಗಂಗಾಧರ ಗುಂತಗೋಳ,
ಲಿಂಗಸ್ಗೂರ