ರಾಯಚೂರು: `ನಾನು ಒಂದು ವರ್ಷದ ಹಿಂದೆ ಕೇಳಿದ್ದಾಗಲೂ ಅದನ್ನೇ ಹೇಳಿದ್ರಿ. ಈಗ ಮತ್ತೆ ಸಭೆಯಲ್ಲಿ ಅದನ್ನೇ ಹೇಳ್ತಿರಿ. ಎಂ.ಪಿಯಾದ ನಾನು ಮತ್ತು ಇಲ್ಲಿನ ಜಿಲ್ಲಾಧಿಕಾರಿ ನೀವು ಹೇಳುವುದನ್ನು ಕೇಳಲು ಇಲ್ಲ. ಕೆಲ್ಸಾನೇ ಮಾಡಿಲ್ಲ. ರಾಜ್ಯದಲ್ಲಿ ಸರ್ಕಾರವೇ ಸರಿ ಇಲ್ಲ. ನಾವೇನು ಕೆಲ್ಸಾ ಮಾಡುವುದಿಲ್ಲ. ನಮ್ಗೇನೂ ಆಗುವುದಿಲ್ಲ ಎಂಬ ಧೋರಣೆ ನಿಮ್ಮದು. ಅದನ್ನು ಬದಲಾಯಿಸಿಕೊಂಡು ಜನರ ಕೆಲಸ, ನೆನೆಗುದಿಗೆ ಬಿದ್ದ ಕಾಮಗಾರಿ ತುರ್ತು ಅನುಷ್ಠಾನಕ್ಕೆ ಮುಂದಾಗಬೇಕು~.
ರಾಯಚೂರು ಲೋಕಸಭಾ ಕ್ಷೇತ್ರದ ಸಂಸತ್ಸದಸ್ಯ ಎಸ್.ಪಕ್ಕೀರಪ್ಪ ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಅಧಿಕಾರಿಗಳ ಹಾರಿಕೆ ಉತ್ತರ, ಅಸಮರ್ಪಕ ಮಾಹಿತಿಗೆ ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ.
ನಾನು ಗಮನಿಸಿದ ಪ್ರಕಾರ ದೇಶದಲ್ಲಿಯೇ ಅಧ್ವಾನ ಅಧಿಕಾರಿಗಳೆಂದರೆ ರಾಯಚೂರು ಜಿಲ್ಲೆಯಲ್ಲಿನ ಅಧಿಕಾರಿಗಳು. ಕೆಲ್ಸಾ ಮಾಡೋದಿಲ್ಲ. ಯೋಜನೆಗಳ ಕಾಮಗಾರಿ ಪ್ರಗತಿ ಬಗ್ಗೆ ಮಾತ್ರ ಸಮರ್ಪಕ ವಿವರಣೆ ನೀಡುವುದಿಲ್ಲ ಎಂದು ಹೇಳಿದರು.
ಜಲ ನಿರ್ಮಲ ಯೋಜನೆ, ಕುಡಿಯುವ ನೀರು ಯೋಜನೆ ಸೇರಿದಂತೆ ಹಲವು ವಿಭಾಗದ ನೆನೆಗುದಿಗೆ ಬಿದ್ದ ಕಾಮಗಾರಿ ಪ್ರಗತಿ, ಸದ್ಯದ ಸ್ಥಿತಿ, ಆಗಬೇಕಾದ ಕಾರ್ಯದ ಬಗ್ಗೆ ಜಿ.ಪಂ ಪ್ರಭಾರ ಸಿಇಒ ಆದ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಆದೇಶ ನೀಡಿದರು.