ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿಗೂ ಒಂದು ಕೋರ್ಸ್

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಇಂದಿನ ತಂತ್ರಜ್ಞಾನ ಯುಗದ ನಾಗಲೋಟದ ಬದುಕು, ನಾನಾ ಚಿಂತೆಗಳು, ಒತ್ತಡ ಇತ್ಯಾದಿಗಳು ಜೀವನದಲ್ಲಿ ಜಿಗುಪ್ಸೆ ಮೂಡಿಸಿ ನೆಮ್ಮದಿ ನಾಶ ಮಾಡಿವೆ. ಬದಲಾದ ಜೀವನ ವಿಧಾನ, ತಾಂತ್ರಿಕತೆ, ಆಧುನಿಕತೆಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.
 
ಈ ವೇಗದ ಯುಗದಲ್ಲಿ ಕೆಲವೊಮ್ಮೆ ಲೈಫು ಇಷ್ಟೇನೆ ಎನಿಸಿ ನಿರಾಸೆ ಉಂಟಾಗುವುದು ಸಹಜ. ಇದಕ್ಕೆ ಪರಿಹಾರ ಎಂಬಂತೆ ನೆಮ್ಮದಿಯನ್ನು ಪುನಃ ಗಳಿಸಿಕೊಳ್ಳಲು ಮೈಸೂರಿನ ವಿದ್ಯಾಸಂಸ್ಥೆಯೊಂದು ಉಚಿತವಾಗಿ ತರಬೇತಿ ನೀಡುತ್ತಿದೆ. ಸಂತೋಷವನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವುದೇ ಇದರ ಉದ್ದೇಶ.

ಪ್ಲೇ ಪ್ಲಾಸುಮ್ ವರ್ಲ್ಡ್ ಯೂನಿವರ್ಸಿಟಿ (ಧನಾತ್ಮಕ ಆಲೋಚನೆಗಳಿಗೆ ವಾರಾಂತ್ಯದ ಕೋರ್ಸ್) ಒಂದು ಖಾಸಗಿ ಸಂಸ್ಥೆ. ಮಂಗಳೂರು ವಿಶ್ವವಿದ್ಯಾನಿಲಯದ  ಶೈಕ್ಷಣಿಕ ಮಂಡಳಿಯ ಮಾಜಿ ಸದಸ್ಯ ಡಾ.ಎಂ.ರಂಗನಾಥ್ ಈ ಸಂಸ್ಥೆಯ ನಿರ್ದೇಶಕರು. ಇವರೊಟ್ಟಿಗೆ ನುರಿತ ವೈದ್ಯರು ತರಬೇತಿ ನೀಡುವರು.

ಚಿಂತೆಯಲ್ಲದೇ ಶಾಂತವಾಗಿ ಸಂತೋಷವಾಗಿ ಇರುವುದನ್ನು ಕಲಿಸುವುದೇ ಬಿಂದಾಸ್ ಲಿವಿಂಗ್ ಕೋರ್ಸ್. ಬ್ರೈನ್ ಸೈನ್ಸ್ ಸಂಶೋಧನೆಗಳನ್ನು ಆಧರಿಸಿ ಈ ಕೋರ್ಸ್ ತಯಾರಿಸಲಾಗಿದೆ. ದೇವರು, ಧರ್ಮ, ಉಪದೇಶಗಳು, ಪೂಜೆ ಇದಾವುದೂ ಇಲ್ಲಿ ಇಲ್ಲ.

ಎಲ್ಲ ಪ್ರಾಯದವರೂ ಇದಕ್ಕೆ ಸೇರಬಹುದು, ಅದರಲ್ಲೂ ಯುವಪೀಳಿಗೆಗೆ ಹೆಚ್ಚು ಉಪಯುಕ್ತ.  ಕಳೆದ ಡಿಸೆಂಬರ್ 11ರಿಂದ `ಸಂತೋಷವಾಗಿ ಇದ್ದುಬಿಡಿ~ ಕಾರ್ಯಾಗಾರ ಆರಂಭವಾಗಿದೆ. 25 ಮಂದಿ ತರಬೇತಿ ಪಡೆಯುತ್ತಿದ್ದು, ಇವರಲ್ಲಿ 15 ಮಂದಿ ವಿದ್ಯಾರ್ಥಿಗಳು.

ಆತಂಕ ನಿವಾರಣೆ, ಸಮಸ್ಯೆಗಳಿಗೆ ಪರಿಹಾರ, ದುಡಿಯುವ- ಬದುಕುವ ಉತ್ಸಾಹ ಪಡೆಯಲು, ಕೆಲ ದೈಹಿಕ ತೊಂದರೆಗಳನ್ನು ನಿವಾರಿಸಿಕೊಳ್ಳಲು ಈ ಕೋರ್ಸ್ ಸಹಾಯಕ ಎಂಬುದು ತಜ್ಞರ ಅಭಿಮತ. ಎಲ್ಲವೂ ಪ್ರಾಯೋಗಿಕ ತರಗತಿಗಳೇ. ಯೋಗ, ಧ್ಯಾನ, ವ್ರತ ಇದಾವುದು ಇರುವುದಿಲ್ಲ.

ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ಇಟಲಿ, ಸ್ವಿಟ್ಜರ್‌ಲೆಂಡ್, ಥಾಯ್ಲೆಂಡ್ ಕಾಂಬೋಡಿಯಾ ದೇಶಗಳಲ್ಲೂ ಈ ಕೋರ್ಸ್ ಪ್ರಚಲಿತದಲ್ಲಿದೆ. ತುಂಬಾ ಬುದ್ದಿವಂತರಾಗಿದ್ದೂ, ಉತ್ತಮ ಶಿಕ್ಷಣ ಮತ್ತು ಉನ್ನತ ಹುದ್ದೆ ಪಡೆದವರೆಲ್ಲರೂ ಸಂತೋಷವಾಗಿರುವುದಿಲ್ಲ.

ಶ್ರೀಮಂತರೆಲ್ಲರೂ ಖುಷಿಯಾಗಿರುವುದಿಲ್ಲ. ಭಾಷಣ ಕೇಳಿದಾಕ್ಷಣ, ಪುಸ್ತಕ ಓದಿದಾಕ್ಷಣ ವ್ಯಕ್ತಿತ್ವ ಬದಲಾಗುವುದು ಕಷ್ಟ. ಜೀವನದಲ್ಲಿ ನೆಮ್ಮದಿ ಅತಿಮುಖ್ಯ, ಸಂತೋಷ ಇದ್ದರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ.

ನೆಮ್ಮದಿಗೂ ಕ್ಲಾಸಿಗೆ ಹೋಗಬೇಕೇ ಎಂದು ಯಾರಿಗಾದರೂ ಅನಿಸದೇ ಇರುವುದಿಲ್ಲ. ಸಂತೋಷದಿಂದ ಇರಲು ಶಿಕ್ಷಣ ಮತ್ತು ತರಬೇತಿ ಬೇಕು ಎಂಬುದನ್ನು ವೈದ್ಯಕೀಯ ಮತ್ತು ನರವಿಜ್ಞಾನ ಸಂಶೋಧನೆಗಳು ದೃಢಪಡಿಸಿವೆ.
 
ಸಂತೋಷದಿಂದಿರಲು ಬುದ್ಧಿವಂತಿಕೆ ಮತ್ತು ಹಣಕ್ಕಿಂತಲೂ ಮಿಗಿಲಾಗಿ, ನಮ್ಮ ಭಾವನೆಗಳ ಮೇಲೆ ಹಿಡಿತ (ಎಮೊಷನಲ್ ಕ್ವಾಲಿಟಿ-ಇಕ್ಯು), ಜನರೊಟ್ಟಿಗೆ ವಿಶ್ವಾಸದ ಸ್ನೇಹಸಂಬಂಧಗಳು (ಸೋಶಿಯಲ್ ಇಂಟೆಲಿಜೆನ್ಸ್ ಕ್ವಾಲಿಟಿ-ಎಸ್‌ಕ್ಯು) ಪ್ರಮುಖ ಪಾತ್ರ ವಹಿಸುತ್ತವೆ.

* ಸಂತೋಷ ಶಾಶ್ವತವಾಗಿ ಉಳಿಯಬೇಕಾದರೆ ಮೆದುಳಿಗೆ ಖುಷಿಯ ಮೇವನ್ನು ಹಾಕಬೇಕು.

* ಸಂತೋಷ ವ್ಯರ್ಥವಾಗುವುದನ್ನು ತಪ್ಪಿಸಲು ಕೆಲವು ವಿಧಾನಗಳನ್ನು ಕಲಿಯಬೇಕು.

* ಹೊಸ ಅಭ್ಯಾಸಗಳು ಮೈಗಂಟಿದ ಹಾಗೆ ರೂಢಿಯಾಗುವುದಕ್ಕೆ ವೈಜ್ಞಾನಿಕ ಕ್ರಮ ಅಗತ್ಯ. ಇಲ್ಲದಿದ್ದರೆ `ಕಾಮನ್ ಸೆನ್ಸ್~ ಎನಿಸಿ ಎಲ್ಲವೂ ಸೋತು ಹೋಗುತ್ತವೆ.

ಮೇಲಿನ ಮೂರು ಅಂಶಗಳು ಬಲವಾದ ವೈಜ್ಞಾನಿಕ ತಳಹದಿಯ ಮೇಲೆ ನಿಂತಿವೆ.
 ಕನ್ನಡಿ ನರಕೋಶಗಳು ಎಂಬ ಕೋಶಗಳಿಂದ ನಾವು ಬೇರೆಯವರ ಮುಖ ಭಾವನೆ ಮತ್ತು ಚಟುವಟಿಕೆಗಳನ್ನು ಕನ್ನಡಿಯಂತೆ ಪ್ರತಿಫಲಿಸುತ್ತೇವೆ. ಇದು ನಿಮ್ಮ ನಿಯಂತ್ರಣದಲ್ಲಿ ಇಲ್ಲದಿದ್ದರೆ ಇದರಿಂದಾಗಿ ಬೇರೆಯವರ ಭಾವನೆಗಳು ಮತ್ತು ಇಂಗಿತಗಳನ್ನು ಗ್ರಹಿಸುವುದಷ್ಟೇ ಅಲ್ಲದೇ ಅದನ್ನೆಲ್ಲ ನಮ್ಮಳಗೂ ಅನುಭವಿಸಿ ಬಿಡುತ್ತೇವೆ.

ಮತ್ತೊಬ್ಬರ ಭಾವನೆಗಳಿಗೆ ನಾವು ಪ್ರತಿಕ್ರಿಯಿಸುವುದನ್ನು ಯೋಚಿಸಿ ಮಾಡಲಾಗುವುದಿಲ್ಲ. ಅದು ತಟ್ಟನೆ ಜೆಟ್ ವೇಗದಲ್ಲಿ ಆಗಿ ಬಿಡುತ್ತದೆ. ಇದರಿಂದ ತಕ್ಷಣ ನಾವು ಒಬ್ಬರೊಂದಿಗೆ ಸಂಪರ್ಕ ಸಾಧಿಸುವುದೋ ಮತ್ತು ಸಂಪರ್ಕ ನಿಲ್ಲಿಸುವುದೋ ನಡೆದುಹೋಗಿರುತ್ತದೆ.

ವ್ಯಕ್ತಿಯೊಡನೆ ನಮಗೆ ಸಂಬಂಧ ಹಿತವಾಗಿದ್ದರೆ ತಕ್ಷಣ ನಮ್ಮ ಮೆದುಳಿನಲ್ಲಿ `ಡೊಪಮಿನ್~ ಎಂಬ ಸುಖದ ಅನುಭವ ನೀಡುವ ಹಾರ್ಮೋನು ತಯಾರಾಗುತ್ತದೆ. ಯಾವುದೇ ಕೆಲಸವನ್ನು ತಪ್ಪಿಲ್ಲದೇ ಮಾಡುವುದಕ್ಕೂ, ಓದಿದ್ದನ್ನು ಗ್ರಹಿಸುವುದಕ್ಕೂ ಮೆದುಳಿನಲ್ಲಿ ಡೊಪಮಿನ್ ಹೆಚ್ಚಿನ ಪ್ರಮಾಣದಲ್ಲಿ ಇದ್ದಾಗ ಸಾಧ್ಯ.

ಉತ್ತಮ ಗುಣಮಟ್ಟದ ವಿಶ್ವಾಸ ಮತ್ತು ನಂಬಿಕೆಗಳಿಂದ ಕೂಡಿದ ಸಾಮಾಜಿಕ ಸಂಬಂಧಗಳು ಯಶಸ್ಸು ಮತ್ತು ನೆಮ್ಮದಿಗೆ ಬುನಾದಿ. ಈ ಸಾಮಾಜಿಕ ಸಂಬಂಧಗಳನ್ನು ನಿರ್ವಹಿಸಿಕೊಂಡು ಹೋಗಬೇಕಾದರೆ ಭಾವನೆಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಹೋಗುವ ಪ್ರೌಢತೆ ಬೇಕು. ಕಾರ್ಯಾಗಾರದಲ್ಲಿ ಈ ಎಲ್ಲ ಸಂಗತಿಗಳಿಗೂ ಶಿಕ್ಷಣ ತರಬೇತಿ ನೀಡಲಾಗುತ್ತದೆ.

ಯಾವುದೇ ಊರಿನವರೂ ಕೋರ್ಸ್‌ಗೆ ಸೇರಬಹುದು. ಯಾವುದೇ ಶುಲ್ಕ ಇಲ್ಲ. ಎಂಟು ವಾರದ ಈ ಶಿಬಿರದಲ್ಲಿ ಶನಿವಾರ ಮತ್ತು ಭಾನುವಾರ ಎರಡು ಗಂಟೆ ತರಗತಿಗಳು ಇರುತ್ತವೆ. ಕಲಿಕಾ ಸಾಮಗ್ರಿಗಳನ್ನು  ನೀಡಲಾಗುವುದು. ಪರ ಊರಿನಿಂದ ಬರುವವರಿಗೆ ಹಾಸ್ಟೆಲ್ ಸೌಲಭ್ಯ ಇದೆ. ತರಬೇತಿ ಮುಗಿದ ನಂತರ ಸರ್ಟಿಫಿಕೇಟ್ ನೀಡಲಾಗುವುದು. ಆನ್‌ಲೈನ್‌ನಲ್ಲೂ ಹೆಸರು ನೋಂದಾಯಿಸಬಹುದು.

ಹೆಚ್ಚಿನ ಮಾಹಿತಿಗೆ ಮೊಬೈಲ್:9845654397 ಅಥವಾ www.playpossum.org ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT