ಹೊಸದುರ್ಗ: ಪ್ರತಿಯೊಬ್ಬ ವ್ಯಕ್ತಿ ನೆಮ್ಮದಿಯಾಗಿ ಜೀವಿಸಲು ಮಾನವ ಹಕ್ಕುಗಳು ಸಹಕಾರಿಯಾಗುತ್ತವೆ ಎಂದು ಪಟ್ಟಣದ ಜೆಎಂಎಫ್ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ.ವೇಣುಗೋಪಾಲ್ ತಿಳಿಸಿದರು.
ಮಂಗಳವಾರ ಪಟ್ಟಣದ ಸಿವಿಲ್ ನ್ಯಾಯಾಲಯದ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವರು ವಿವಿಧ ಹಕ್ಕುಗಳಿಂದ ವಂಚಿತರಾಗಿ, ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡು ಬದುಕುತ್ತಿದ್ದಾರೆ. ಈ ಬಗ್ಗೆ ಸಂವಿಧಾನದ ಜವಾಬ್ದಾರಿಗಳನ್ನು ನಿಭಾಯಿಸುವವರು ಕಾಳಜಿ ವಹಿಸಬೇಕಿದೆ. ಹಕ್ಕುಗಳಿಗೆ ಚ್ಯುತಿ ತರುವಂತವರನ್ನು ಸರಿದಾರಿಗೆ ತರಬೇಕಾದರೆ ನ್ಯಾಯಾಲಯದ ವತಿಯಿಂದ ನಡೆಯುವ ವಿವಿಧ ಕಾನೂನು ಅರಿವು ಕಾರ್ಯಕ್ರಮಗಳ ಜ್ಞಾನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ವಕೀಲ ಪಾಲನೇತ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಸಂಗಪ್ಪ ದರಗದ, ವಕೀಲರಾದ ಗುರುಬಸಪ್ಪ, ಷಡಾಕ್ಷರಪ್ಪ, ಬಸವರಾಜು, ಜಗದೀಶ್ನಾಯ್ಕ್, ರುಕ್ಮಿಣಿ, ಕೆ.ಮಲ್ಲಿಕಾರ್ಜುನಪ್ಪ, ಡಿ.ನಿರಂಜನ ಮೂರ್ತಿ ಇದ್ದರು.