ರಾಯಚೂರು: ನಗರ ಅಭಿವೃದ್ಧಿ ಯೋಜನೆ ನಿಯಮಾವಳಿ ಅನುಸರಿಸಿಯೇ ಆಸರೆ ಪುನರ್ವಸತಿ ನವಗ್ರಾಮ ನಿರ್ಮಿಸಲಾಗಿದೆ. ಭವಿಷ್ಯದ ಇಪ್ಪುತ್ತು ವರ್ಷದಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಯೋಜನೆ ದೃಷ್ಟಿಯಲ್ಲಿಟ್ಟುಕೊಂಡು ದಾನಿಗಳ ನೆರವಿನಿಂದ ಸರ್ಕಾರ ಮನೆ ಕಟ್ಟಿಕೊಟ್ಟಿದೆ.
ಮನೆ ಹೊರತುಪಡಿಸಿ ಈ ನವಗ್ರಾಮದಲ್ಲಿನ ಉಳಿದ ಜಮೀನು ಸರ್ಕಾರದ್ದೇ ಆಗಿರುತ್ತದೆ. ಅತಿಕ್ರಮಣ ಮಾಡಿ ಕಟ್ಟಡ ಕಟ್ಟಿ ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ಹೇಳಿದರು.
ಗುರುವಾರ ರಾಯಚೂರು ತಾಲ್ಲೂಕಿನ ದುಗನೂರು ಗ್ರಾಮದ ನೆರೆ ಸಂತ್ರಸ್ತರಿಗೆ ಆಸರೆ ಪುನರ್ವಸತಿ ಯೋಜನೆಯಡಿ ನಿರ್ಮಿಸಿದ ನವಗ್ರಾಮದಲ್ಲಿ 146 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಎರಡು ವರ್ಷದ ಹಿಂದೆ ಕಷ್ಟದಲ್ಲಿದ್ದ ತಮಗೆ ಈಗ ಸಂತೋಷದ ದಿನ. ಪ್ರವಾಹ ಸಂದರ್ಭದಲ್ಲಿ ಸಂಕಷ್ಟ ಎದುರಿಸಿದ ಕುಟುಂಬಗಳನ್ನು ಗುರುತಿಸಲಾಗಿತ್ತು. ಒಟ್ಟು 229 ಮನೆ ನಿರ್ಮಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಈಗ ಮನೆ ವಿತರಿಸಲಾಗುತ್ತಿದೆ.
146 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಇನ್ನೂ 83 ಮನೆ ಬಾಕಿ ಉಳಿಯುತ್ತವೆ. ಪ್ರವಾಹದಿಂದ ತೊಂದರೆ ಅನುಭವಿಸಿದ ಮತ್ತಷ್ಟು ಕುಟುಂಬಗಳಿದ್ದರೆ ಅಂಥವರಿಗೆ ದೊರಕಿಸಲಾಗುವುದು. ಒಂದೇ ಕುಟುಂಬಕ್ಕೆ ಮತ್ತೊಂದು ಮನೆ ವಿತರಣೆ ಮಾಡುವುದಿಲ್ಲ ಎಂದು ಹೇಳಿದರು.
ನವಗ್ರಾಮದ ಅಭಿವೃದ್ಧಿ ಸರ್ಕಾರ ಹಂತ ಹಂತವಾಗಿ ಪ್ರಯತ್ನಿಸಲಿದೆ. ಆಸ್ಪತ್ರೆ, ಶಾಲೆ ನಿರ್ಮಾಣ ಮಾಡಲು ಜಾಗೆ ಕಾಯ್ದಿರಿಸಿದೆ. ಪವರ್ಗ್ರಿಡ್ ಸಂಸ್ಥೆ ಸೌರ ವಿದ್ಯುತ್ ಬೀದಿ ದೀಪ ಅಳವಡಿಸಿದೆ. ಸದ್ಯ ತಾತ್ಕಾಲಿಕವಾಗಿ ಮಣ್ಣಿನ ರಸ್ತೆ ನಿರ್ಮಿಸಲಾಗಿದೆ. ಗ್ರಾಮ ಪಂಚಾಯಿತಿಯು ಮುಂಬರುವ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಪಡಿಸಿದರೆ ಗ್ರಾಮಕ್ಕೆ ಅನುಕೂಲ ಎಂದು ತಿಳಿಸಿದರು.
ತಹಸೀಲ್ದಾರ್ ಡಾ.ಮಧುಕೇಶ್ವರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಿ.ಚಂದ್ರಶೇಖರರೆಡ್ಡಿ, ಗಿಲ್ಲೇಸುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ, ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಗ್ರಾಮದ ಹಿರಿಯರು, ಮುಖಂಡರು ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.