ಹುಬ್ಬಳ್ಳಿ: ನಗರದ ತೋಳನಕೆರೆ ದಂಡೆಯಲ್ಲಿ ಜಿಲ್ಲಾಡಳಿತ ಗುರುವಾರ ನೆಲಸಮ ಮಾಡಿದ ಕರಿಯಮ್ಮ ದೇವಿ ಗುಡಿಯ ಜಾಗದಲ್ಲಿ ಸ್ಥಳೀಯರು ಶುಕ್ರವಾರ ಪೂಜೆ ನೆರವೇರಿಸಿದರು.
ತೋಳನಕೆರೆಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದ ಕಾರಣ ಗುರುವಾರ ಜಿಲ್ಲಾಡಳಿತ ದೇವಸ್ಥಾನವನ್ನು ಕೆಡವಿತ್ತು.
ಇದರಿಂದ ಕುಪಿತಗೊಂಡು ಪ್ರತಿಭಟನೆ ನಡೆಸಿದ ಸ್ಥಳೀಯರು ಕೆರೆ ಅಭಿವೃದ್ಧಿಗೆ ಇಟ್ಟಿದ್ದ ಸಿಮೆಂಟ್ ಇಟ್ಟಿಗೆಗಳನ್ನು ತಂದು ತಾತ್ಕಾಲಿಕ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು.
ಇದೇ ಜಾಗದಲ್ಲಿ ಶುಕ್ರವಾರ ಮಧ್ಯಾಹ್ನ ಜಮಾಯಿಸಿದ ಸುಮಾರು 60 ಮಂದಿ ದೇವಸ್ಥಾನದ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ದೇವಸ್ಥಾನ ಮರುನಿರ್ಮಾಣ ಮಾಡುವುದಾಗಿ ತಿಳಿಸಿದರು. ಪ್ರತಿಷ್ಠಾಪನೆ ಮಾಡಿದ ಮೂರ್ತಿಯ ಮುಂದೆ ಹಣ್ಣುಕಾಯಿ ಹೂವು ಇಟ್ಟು ಪೂಜೆ ಸಲ್ಲಿಸಿದರು.
ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಯನ್ನೂ ಮಾಡಿದರು. ಹಿಂದೂ ಸಂಘಟನೆಗಳ ಮುಖಂಡರಾದ ಜಯತೀರ್ಥ ಕಟ್ಟಿ, ರಘೋತ್ತಮ ಕುಲಕರ್ಣಿ, ಗಣು ಜರತಾರಘರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.