ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲೋಗಲ್ ರೇಲ್ವೆ ಕ್ರಾಸಿಂಗ್ ಮುಚ್ಚಲು ಆದೇಶ

Last Updated 9 ಅಕ್ಟೋಬರ್ 2011, 6:35 IST
ಅಕ್ಷರ ಗಾತ್ರ

`ಹೆದ್ದಾರಿಗೆ ಜಮೀನು ನೀಡಿ ದಾರಿ ಯಿಲ್ಲದೇ ಪರದಾಡುತ್ತಿರುವ ಹಾವೇರಿ ತಾಲ್ಲೂಕಿನ ನೆಲೋಗಲ್ಲ ಗ್ರಾಮಸ್ಥರಿಗೆ ಜಿಲ್ಲಾಡಳಿತವು ಇದ್ದೊಂದು ದಾರಿಯನ್ನು ಬಂದ್ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ
ಗ್ರಾಮದ ಎದುರಿನಲ್ಲಿ ದೊಡ್ಡ ರಸ್ತೆ ಬರಲಿದೆ. ಸುಗಮ ಸಂಚಾರಕ್ಕೆ ಅನು ಕೂಲವಾಗಲಿದೆ ಎಂಬ ನಿರೀಕ್ಷೆಯಿಂದ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ನೂರಾರು ಎಕರೆ ಜಮೀನು ನೀಡಿದ್ದಾರೆ. ಆದರೆ, ಇಂದು ಅದೇ ಗ್ರಾಮಸ್ಥರು ಅಡ್ಡಾಡಲು ದಾರಿ ಕೊಡಿ ಎಂದು ಬೇಡಿ ಕೊಳ್ಳುವ ಅನಿವಾರ್ಯತೆ ಸೃಷ್ಟಿಯಾ ಗಿದೆ. ಹೌದು, ರಾಷ್ಟ್ರೀಯ ಹೆದ್ದಾರಿ-4 ರ ಚತುಷ್ಪಥ ರಸ್ತೆ ಗ್ರಾಮದಿಂದ ಅನತಿ ದೂರದಲ್ಲಿ ಹಾದು ಹೋದರೂ ಗ್ರಾಮಕ್ಕೆ ತೆರಳಲು ಪ್ರತ್ಯೇಕ ರಸ್ತೆ ಇಲ್ಲ. ಹೆದ್ದಾರಿಗೆ ಪೂರಕವಾಗಿ ಸರ್ವಿಸ್ ರಸ್ತೆಗಳನ್ನು ನಿರ್ಮಿಸಿಲ್ಲ. ಈ ನಡುವೆ ರೇಲ್ವೆ ಲೇವಲ್ ಕ್ರಾಸಿಂಗ್ ಗೇಟ್ ಬಂದ್ ಮಾಡಲು ಜಿಲ್ಲಾಡಳಿತ ಅಕ್ಟೋಬರ್ 7ರಂದು ಆದೇಶ ಹೊರಡಿ ಸಿದೆ.

ಇದರಿಂದ ಇದ್ದೊಂದು ರಸ್ತೆಯೂ ಇಲ್ಲದೇ ಹಾವೇರಿಯಿಂದ ಕೇವಲ ಆರು ಕಿಲೋ ಮೀಟರ್ ದೂರದಲ್ಲಿರುವ ನೆಲೋಗಲ್ಲ ಗ್ರಾಮ ಯಾವುದೇ ರಸ್ತೆ ಯಿಲ್ಲದೇ ನಡುಗಡ್ಡೆಯಂತಾಗಲಿದೆ. 

ಗ್ರಾಮದ ಸಂಪರ್ಕಕ್ಕೆ ಇರುವ ರೇಲ್ವೆ ಲೇವಲ್ ಕ್ರಾಸಿಂಗ್ ರಸ್ತೆಯನ್ನು ಬಂದ್ ಮಾಡಿದರೆ, ಅನಿವಾರ್ಯವಾಗಿ ಎಲ್ಲರೂ ಹೆದ್ದಾರಿ ಮೇಲೆ ಓಡಾಡಬೇಕಾಗುತ್ತದೆ. ವಾಹನ ದಟ್ಟನೆ ಹೆಚ್ಚಿರುವುದರಿಂದ ಹೆದ್ದಾರಿಯಲ್ಲಿ ದನಕರುಗಳನ್ನು ಹಿಡಿದು ಕೊಂಡು ಹೋಗುವುದು ಕಷ್ಟ ಸಾಧ್ಯ. ದೈರ್ಯ ಮಾಡಿ ಹೆದ್ದಾರಿಯಲ್ಲಿ ಓಡಾ ಡಿದರೆ, ನಿರಾತಂಕವಾಗಿ ಮನೆಗೆ ಮರಳುವ ನಂಬಿಕೆ ಇಲ್ಲದಾಗಿದೆ. ಗ್ರಾಮದ ಏಳೆಂಟು ಜನರು, 20ಕ್ಕೂ ಹೆಚ್ಚು ದನಕರುಗಳು ಪ್ರಾಣ ಕಳೆದು ಕೊಂಡಿದ್ದರಿಂದ ಈ ಹೆದ್ದಾರಿ ಓಡಾಟ ಎಂದರೆ ಗ್ರಾಮಸ್ಥರು ಬೆಚ್ಚಿ ಬೀಳುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಈಗ ಇದ್ದೊಂದು ರಸ್ತೆ ಬಂದ್‌ಮಾಡಿದರೆ, ಅನಿವಾರ್ಯ ವಾಗಿ ಮಕ್ಕಳು, ವೃದ್ದರು ಎಲ್ಲರೂ ಹೆದ್ದಾರಿ ಮೇಲೆ ಓಡಾಡಬೇಕು. ಪರ್ಯಾಯ ರಸ್ತೆ ಇದ್ದಾಗಲೇ ಇಷ್ಟೊಂದು ಸಾವು ನೋವು ಸಂಭವಿಸಿವೆ. ಇನ್ನೂ ಯಾವುದೇ ರಸ್ತೆಗಳಿಲ್ಲದೇ ಕೇವಲ ಹೆದ್ದಾರಿ ಮೇಲೆ ಓಡಾಡು ವುದಾದರೂ ಹೇಗೆ ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.

ಗ್ರಾಮಕ್ಕೆ ಯಾವುದೇ ಪರ್ಯಾಯ ರಸ್ತೆಗಳು ಇಲ್ಲದಿದ್ದರೂ ಏಕಾಏಕಿ ಜಿಲ್ಲಾಧಿಕಾರಿಗಳು ಈ ರೇಲ್ವೆ ಲೇವಲ್ ಕ್ರಾಸಿಂಗ್ ಬಂದ್ ಮಾಡಲು ಆದೇಶ ಹೊರಡಿಸುವ ಮೂಲಕ ಈ ರಸ್ತೆ ಸಂಪರ್ಕ ಕಡಿತಗೊಳಿಸಲು ಮುಂದಾ ಗಿರುವುದು ಏಕೆ ಎಂಬುದು ಗೊತ್ತಾ ಗುತ್ತಿಲ್ಲ. ಹೆದ್ದಾರಿಗೆ ಸರ್ವಿಸ್ ರಸ್ತೆ ಗಳನ್ನು ನಿರ್ಮಿಸುವವರೆಗೆ ಯಾವುದೇ ಕಾರಣಕ್ಕೂ ರೇಲ್ವೆ ಲೇವಲ್ ಕ್ರಾಸಿಂಗ್ ರಸ್ತೆಯನ್ನು ಮುಚ್ಚಬಾರದು. ಈಗಾ ಗಲೇ ಹೊರಡಿಸಿರುವ ಆದೇಶವನ್ನು ಜಿಲ್ಲಾಧಿಕಾರಿಗಳು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರತಿಭಟನೆಗೆ ನಿರ್ಧಾರ: ಜಿಲ್ಲಾಧಿ ಕಾರಿಗಳ ಹೊರಡಿಸಿರುವ ಆದೇಶದ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ಶನಿವಾರ ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರಲ್ಲದೇ, ಅದಕ್ಕೆ ಸ್ಪಂದಿಸದಿದ್ದರೆ, ಅನಿವಾರ್ಯ ವಾಗಿ ಒಂದೆರಡು ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮದ ಮುಖಂಡ ಚಂದ್ರಪ್ಪ ಚಂದ್ರಾಪಟ್ಟಣ ಎಚ್ಚರಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT