ಬೆಂಗಳೂರು: `ನೇತ್ರದಾನ ಎಲ್ಲ ದಾನಗಳಿಗಿಂತಲೂ ಶ್ರೇಷ್ಠವಾದುದು. ಹೀಗಾಗಿ ಜನತೆ ಸ್ವಯಂಪ್ರೇರಿತರಾಗಿ ನೇತ್ರ ದಾನ ಮಾಡುವ ಪಣ ತೊಡಬೇಕು~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕರೆ ನೀಡಿದ್ದಾರೆ.
ಅಪೊಲೊ ಆಸ್ಪತ್ರೆಯು ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ನೇತ್ರದಾನ ಮಾಡುವುದಾಗಿ ಪ್ರಕಟಿಸಿದ ಹೆಗ್ಡೆ, ಹೆಚ್ಚು ಹೆಚ್ಚು ಜನತೆ ದೃಷ್ಟಿ ದೋಷವಿರುವಂತಹ ವ್ಯಕ್ತಿಗಳಿಗೆ ಕಣ್ಣುಗಳನ್ನು ದಾನ ಮಾಡಲು ಮುಂದೆ ಬರಬೇಕು ಎಂದು ಕೋರಿದರು.
`ಒಬ್ಬ ವ್ಯಕ್ತಿ ತಮ್ಮ ಜೀವಿತಾವಧಿಯಲ್ಲಿ ಮಾಡಿದ ಯಾವುದೇ ದಾನಕ್ಕಿಂತ ನೇತ್ರದಾನ ಬಹಳ ಶ್ರೇಷ್ಠವಾದುದು.
ಸಾವಿನ ನಂತರ ಕೂಡ ನೇತ್ರದಾನ ಮಾಡಬಹುದು. ಆದರೆ, ಬಹಳಷ್ಟು ಜನರಿಗೆ ಇನ್ನೂ ನೇತ್ರದಾನದ ಮಹತ್ವವೇ ತಿಳಿದಿಲ್ಲ ಅಥವಾ ಮೂಢನಂಬಿಕೆಗಳಿಗೆ ಜೋತು ಬಿದ್ದಿರುವುದು ವಿಷಾದನೀಯ ಸಂಗತಿ~ ಎಂದರು. ಜನರಲ್ಲಿ ಜಾಗೃತಿ ಕೊರತೆ ಜತೆಗೆ ಕುಟುಂಬ ಸದಸ್ಯರ ವಿರೋಧ ಕೂಡ ನೇತ್ರದಾನ ಮಾಡುವುದಕ್ಕೆ ಹಿಂದೇಟು ಹಾಕಲು ಮುಖ್ಯ ಕಾರಣ ಎಂದು ಅವರು ವಿಶ್ಲೇಷಿಸಿದರು.
ಅಪೊಲೊ ಆಸ್ಪತ್ರೆಯ ಸಿಒಒ ಡಾ. ಉಮಾಪತಿ ಪನ್ಯಾಲ ಮಾತನಾಡಿ, `ನೇತ್ರದಾನಕ್ಕೆ ಯಾವುದೇ ವಯೋಮಿತಿಯ ಅಡೆತಡೆಯಿಲ್ಲ. ಯಾವುದೇ ವಯಸ್ಸಿನ ವ್ಯಕ್ತಿಗಳು ನೇತ್ರದಾನ ಮಾಡಬಹುದು. ಕನ್ನಡಕ ಹಾಕುವವರು, ಕ್ಯಾಟರಾಕ್ಟ್ ಶಸ್ತ್ರ ಚಿಕಿತ್ಸೆಗೆ ಒಳಗಾದವರು, ಮಧುಮೇಹ ಹಾಗೂ ರಕ್ತದೊತ್ತಡ ಇರುವಂತಹ ವ್ಯಕ್ತಿಗಳು ಕೂಡ ನೇತ್ರದಾನ ಮಾಡಬಹುದು~ ಎಂದರು.
`ರೇಬಿಸ್, ಏಡ್ಸ್ ಮತ್ತಿತರ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳು ಮಾತ್ರ ಕಣ್ಣುಗಳನ್ನು ದಾನ ಮಾಡುವಂತಿಲ್ಲ~ ಎಂದು ಆಸ್ಪತ್ರೆಯ ನೇತ್ರ ತಜ್ಞೆ ಡಾ. ಶಾಲಿನಿ ಶೆಟ್ಟಿ ಮಾಹಿತಿ ನೀಡಿದರು.
ಅಂಧತ್ವ ನಿವಾರಣೆಗೆ ನೇತ್ರದಾನ ಮಾಡುವ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಅಧಿಕ ಸಂಖ್ಯೆಯ ಜನತೆ ಸ್ವಯಂಪ್ರೇರಣೆಯಿಂದ ನೇತ್ರದಾನ ಮಾಡಲು ಪ್ರೋತ್ಸಾಹಿಸುವ ಉದ್ದೇಶದಿಂದ ಅಪೊಲೊ ಆಸ್ಪತ್ರೆಯು ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.