ತುಮಕೂರು: ನೇತ್ರಾವತಿ ತಿರುವು ಯೋಜನೆ ವಿರುದ್ಧ ಅಪಸ್ವರ ಎತ್ತಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ವಿರುದ್ಧ ಕಿಡಿಕಾರಿರುವ ಪ್ರಾಂತ ರೈತ ಸಂಘವು ಬೆಂಗಳೂರಿನಲ್ಲಿ ಮುಂದಿನ ತಿಂಗಳು ಏಳು ಜಿಲ್ಲೆಗಳ ರೈತ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರ ಸಭೆ ನಡೆಸಿ ಹೋರಾಟದ ರೂಪುರೇಷೆ ನಿರ್ಧರಿಸುವುದಾಗಿ ತಿಳಿಸಿದೆ.
ಮುಖ್ಯಮಂತ್ರಿ ಕೇವಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮುಖ್ಯಮಂತ್ರಿ ಎಂಬಂತೆ ವರ್ತಿಸಬಾರದು. ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ದೃಢಪಡಿಸಬೇಕು. ರೈತರಿಂದ ಭೂಮಿ ಕಸಿದುಕೊಳ್ಳುವುದು ಅಭಿವೃದ್ಧಿ ಅಲ್ಲ, ನೀರಾವರಿಯೇ ಅಭಿವೃದ್ಧಿ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.
ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಜಿಲ್ಲೆಗಳ ನೀರಾವರಿ ಸಮಸ್ಯೆ ಬಗೆಹರಿಯಬೇಕಾದರೆ ಪರಮಶಿವಯ್ಯ ವರದಿ ಜಾರಿಗೊಳಿಸುವುದೇ ಮಾರ್ಗವಾಗಿದೆ. ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಈ ಯೋಜನೆ ಪರ ಇದ್ದಾರೆ. ಆದರೆ ಅದೇ ನಂಬಿಕೆ ಮುಖ್ಯಮಂತ್ರಿ ಮೇಲೆ ಇಲ್ಲವಾಗಿದೆ. ನೀರಾವರಿ ಸಚಿವರು ಹೊಂದಿರುವ ದೃಢತೆಯನ್ನು ಮುಖ್ಯಮಂತ್ರಿ ಪ್ರಕಟಿಸಿ ಈ ಜಿಲ್ಲೆಗಳನ್ನು ಬರದಿಂದ ವಿಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.