ಕಠ್ಮಂಡು (ಪಿಟಿಐ): ನೇಪಾಳದಲ್ಲಿ ಶಾಂತಿ, ಸ್ಥಿರತೆ ಮತ್ತು ಪ್ರಗತಿ ನೆಲೆಸಬೇಕು ಎಂಬುದೇ ಭಾರತದ ಆಶಯ, ದೇಶದಲ್ಲಿ ಸ್ಥಗಿತಗೊಂಡ ಶಾಂತಿ ಮಾತುಕತೆಗಳನ್ನು ಮುಂದುವರಿಸಿ ರಾಜಕೀಯ ಬಿಕ್ಕಟ್ಟು ಶಮನಗೊಳಿಸುವುದಕ್ಕೆ ಎಲ್ಲಾ ರಾಜಕೀಯ ಪಕ್ಷಗಳೂ ಭಿನ್ನಾಭಿಪ್ರಾಯ ಬದಿಗೊತ್ತಿ ಒಟ್ಟು ಸೇರುವ ಅಗತ್ಯ ಇದೆ ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಹೇಳಿದ್ದಾರೆ.
ತಮ್ಮ ನೇಪಾಳ ಪ್ರವಾಸದ ಎರಡನೇ ದಿನವಾದ ಬುಧವಾರ ಅವರು ಪ್ರಮುಖ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಆಶಯ ವ್ಯಕ್ತಪಡಿಸಿದರು.ರಾವ್ ಅವರು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಸುಶೀಲ್ ಕೊಯಿರಾಲಾ, ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರನ್ನು ಬೆಳಿಗ್ಗೆ ಭೇಟಿ ಮಾಡಿದ್ದರು.
ಸದ್ಯ ನೆಲೆಸಿರುವ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸಲು ಎಲ್ಲಾ ಪಕ್ಷಗಳೂ ಒಗ್ಗೂಡಬೇಕು ಎಂಬುದನ್ನು ರಾವ್ ಅವರು ಒತ್ತಿ ಹೇಳಿದರು ಎಂದು ಮಾತುಕತೆಯ ಬಳಿಕ ಸುಶೀಲ್ ಕೊಯಿರಾಲಾ ಅವರು ಪತ್ರಕರ್ತರಿಗೆ ತಿಳಿಸಿದರು.