ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಯೋಜನಾ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲಹಾ ಸಂಸ್ಥೆಗಳನ್ನು ನೇಮಿಸಿರುವ ವಿಚಾರದಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪ್ರಕಟಣೆಯಲ್ಲಿ ಹೇಳಿದೆ.
ನಗರವು ಇತ್ತೀಚಿನ ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರವು ಅನೇಕ ಬೃಹತ್ ಕಾಮಗಾರಿಗಳನ್ನು ಕೈಗೊಂಡಿದೆ. ಹೆಚ್ಚುವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಅಂತಹ ಬೃಹತ್ ಮೂಲಭೂತ ಸೌಲಭ್ಯಗಳ ಯೋಜನಾ ವಿವರಗಳ ವರದಿಗಳನ್ನು ತಜ್ಞತೆ ಮತ್ತು ನೈಪುಣ್ಯತೆಯಿರುವ ಸಂಸ್ಥೆಗಳ ಮೂಲಕ ಪ್ರಾಧಿಕಾರವು ಪಾರದರ್ಶಕ ಕಾಯ್ದೆಯ ನಿಯಮಾವಳಿಅನುಸರಿಸಿ ಸಿದ್ಧಪಡಿಸಿಕೊಳ್ಳುತ್ತಿದೆ.
ಬೃಹತ್ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಸಣ್ಣ ಕಾಮಗಾರಿಗಳ ಯೋಜನಾ ವರದಿಗಳನ್ನು ಪ್ರಾಧಿಕಾರದ ಎಂಜಿನಿಯರುಗಳೇ ಸಿದ್ಧಪಡಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
`ವಿ.ವಿ ಪ್ರಮಾದ ಕಾರಣ~
ಶೇಷಾದ್ರಿಪುರ ಕಾಲೇಜಿನ ಮನೋವಿಜ್ಞಾನ ವಿಭಾಗದ ಪ್ರಥಮ ವರ್ಷ ಬಿ.ಎ ತರಗತಿಯ ಫಲಿತಾಂಶ ವಿಳಂಬಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪ್ರಮಾದವೇ ಕಾರಣ ಎಂದು ಶೇಷಾದ್ರಿಪುರ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಡಿ.ರಾಜನ್ ಸ್ಪಷ್ಟನೆ ನೀಡಿದ್ದಾರೆ.
ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೂ ಫಲಿತಾಂಶದಲ್ಲಿ ಗೈರುಹಾಜರು ಎಂದು ಬಂದಿರುವುದಕ್ಕೆ ಕಾಲೇಜು ಕಡೆಯಿಂದ ಯಾವುದೇ ಪ್ರಮಾದವಾಗಿಲ್ಲ. ಈ ಬಾರಿ ವಿಶ್ವವಿದ್ಯಾಲಯವು ಒಬ್ಬ ವಿದ್ಯಾರ್ಥಿಗೆ ಮೂರು ಭಾರಿ ನೋಂದಣಿ ಸಂಖ್ಯೆ ನೀಡಿದ್ದರಿಂದಲೇ ಫಲಿತಾಂಶ ತಡೆಗೆ ಕಾರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಾಯೋಗಿಕ ಪರೀಕ್ಷಾ ನೋಂದಣಿ ಸಂಖ್ಯೆಗೂ ಮತ್ತು ಮುಖ್ಯಪರೀಕ್ಷೆ ನೋಂದಣಿಗೂ ಹೋಲಿಕೆಯಾಗದೆ ಗೈರು ಹಾಜರಿ ಎಂದು ಬಂದಿರಬಹುದೆಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ರೀತಿ ಗೊಂದಲಗಳಿದ್ದರೂ ಫಲಿತಾಂಶ ಪ್ರಕಟಿಸುವಾಗ ವಿಶ್ವವಿದ್ಯಾಲಯ ಕಾಲೇಜನ್ನು ಸಂಪರ್ಕಿಸಲಿಲ್ಲ. ಫಲಿತಾಂಶ ಪ್ರಕಟವಾದ ಮೇಲೆ ಪ್ರಾಂಶುಪಾಲರ ಮೂಲಕ ಸಂಬಂಧಿಸಿದ ಪರೀಕ್ಷಾ ವಿಭಾಗಕ್ಕೆ ದೂರು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.