ಬೆಂಗಳೂರು: ಕೆಎಸ್ಆರ್ಪಿ ಮತ್ತು ಐಆರ್ಬಿ ಸಬ್ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದೆ ವಿಳಂಬ ಮಾಡಲಾಗುತ್ತಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.
ರಾಜ್ಯ ಸರ್ಕಾರ ಕೆಎಸ್ಆರ್ಪಿ ಮತ್ತು ಐಆರ್ಬಿಯ 103 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ 2012ರ ಜನವರಿಯಲ್ಲಿ ಪ್ರಕಟಣೆ ಹೊರಡಿಸಿತ್ತು. ಸಾವಿರಾರು ಆಕಾಂಕ್ಷಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು.
ನೇಮಕ ಪ್ರಕ್ರಿಯೆ ನಿಧಾನವಾಗಿ ನಡೆದು ಸೆಪ್ಟೆಂಬರ್ನಲ್ಲಿ ದೈಹಿಕ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನವೆಂಬರ್ 4ರಂದು ಲಿಖಿತ ಪರೀಕ್ಷೆ ನಡೆಸಲಾಯಿತು. ನಂತರ 1:2ರ ಅನುಪಾತದ ಅನ್ವಯ 2013ರ ಜನವರಿಯಲ್ಲಿ ಸಂದರ್ಶನ ನಡೆಸಿ ಜನವರಿ 10ರಂದು ಆಯ್ಕೆ ಪಟ್ಟಿ ಪ್ರಕಟಿಸಲಾಯಿತು. ನಂತರ ಮಾರ್ಚ್ನಲ್ಲಿ ವೈದ್ಯಕೀಯ ಪರೀಕ್ಷೆ ನಡೆದು ಸಿಂಧುತ್ವ ಮತ್ತು ಅಗತ್ಯ ದಾಖಲಾತಿಗಳ ಪರಿಶೀಲನೆಯೂ ಮುಗಿದಿದೆ. ಆದರೂ, ನೇಮಕಾತಿ ಆದೇಶ ನೀಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ದೂರಿದ್ದಾರೆ.
ನೇಮಕಾತಿ ಕುರಿತು ಮುಖ್ಯ ಕಚೇರಿಯನ್ನು ಸಂಪರ್ಕಿಸಿದರೆ ದಿನಕ್ಕೊಂದು ಮಾಹಿತಿ ನೀಡುತ್ತಿದ್ದಾರೆ ಹೊರತು ಆದೇಶ ನೀಡುತ್ತಿಲ್ಲ. ಅರ್ಜಿ ಸಲ್ಲಿಸಿ 20 ತಿಂಗಳು ಕಳೆದರೂ ನೇಮಕ ಪ್ರಕ್ರಿಯೆ ಮುಗಿದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು ಅತಂತ್ರ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.