ನವದೆಹಲಿ (ಪಿಟಿಐ): ಜುಲೈ 1ರಿಂದ ಅಡುಗೆ ಅನಿಲಕ್ಕೆ ನೇರ ನಗದು ವರ್ಗಾವಣೆ ವ್ಯವಸ್ಥೆ(ಡಿಸಿಟಿ) ಜಾರಿಗೆ ಬಂದಿದೆ. ಈ ಯೋಜನೆಯಡಿ ತೈಲ ಮಾರಾಟ ಕಂಪೆನಿಗಳು ಈವರೆಗೆ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ರೂ222 ಕೋಟಿ ವರ್ಗಾಯಿಸಿವೆ. ಆದರೆ, ಈ ಹಣವನ್ನು ಸರ್ಕಾರ ಈವರೆಗೂ ಕಂಪೆನಿಗಳಿಗೆ ಮರು ಪಾವತಿ ಮಾಡಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಹೇಳಿದೆ.
ಎಲ್ಪಿಜಿ ಗ್ರಾಹಕರಿಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪ್ರತಿ ಸಿಲಿಂಡರ್ಗೆ ರೂ500ರವರೆಗೆ ಸಬ್ಸಿಡಿ ಹಣ ಪಾವತಿಸುತ್ತಿವೆ. ಸದ್ಯ ಈ ಯೋಜನೆ 54 ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದು, ಜನವರಿ 1ರಿಂದ 289 ಜಿಲ್ಲೆಗಳಿಗೆ ವಿಸ್ತರಿಸಲು ಸರ್ಕಾರ ಯೋಜನೆ ಹಮ್ಮಿಕೊಂಡಿದೆ. ಆದರೆ, ಕಂಪೆನಿಗಳಿಗೆ ಸಬ್ಸಿಡಿ ಹಣ ಪಾವತಿಸದೆ ಯೋಜನೆ ವಿಸ್ತರಿಸುವುದು ಹೇಗೆ ಎಂದು ‘ಐಒಸಿ’ ಕಾರ್ಯನಿರ್ವಾಹಕ ನಿರ್ದೇಶಕ ಎ.ಎನ್.ಝಾ ಆ. 21ರಂದು ಹಣಕಾಸು ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಕೇಳಿದ್ದಾರೆ.
ಆ. 21ರವರೆಗೆ ತೈಲ ಮಾರಾಟ ಕಂಪೆನಿಗಳು ಎಲ್ಪಿಜಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ರೂ188 ಕೋಟಿ ಸಬ್ಸಿಡಿ ಹಣ ವರ್ಗಾಯಿಸಿವೆ. ಈಗ ಈ ಮೊತ್ತ ರೂ222 ಕೋಟಿ ದಾಟಿದೆ. ಆದರೆ, ಸರ್ಕಾರ ಇದುವರೆಗೆ ಹಣ ಪಾವತಿಸಿಲ್ಲ. ಯೋಜನೆ ವಿಸ್ತರಿಸುವ ಮುನ್ನ ಸರ್ಕಾರ ಬಾಕಿ ಹಣ ಪಾವತಿಸಲಿ ಎಂದು ಅವರು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
289 ಜಿಲ್ಲೆಗಳಿಗೆ ಎಲ್ಪಿಜಿ ನೇರ ನಗದು ಯೋಜನೆ ವಿಸ್ತರಣೆಗೊಂಡರೆ, ತೈಲ ಮಾರಾಟ ಕಂಪೆನಿಗಳು ವಾರ್ಷಿಕ ರೂ27,000 ಕೋಟಿ ಸಬ್ಸಿಡಿ ಹಣ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕಾಗುತ್ತದೆ.