ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಸಂಪನ್ಮೂಲ ಜನರ ಆಸ್ತಿ, ಸರ್ಕಾರದ್ದಲ್ಲ: ಸಮಂತ ರೇ

Last Updated 11 ಅಕ್ಟೋಬರ್ 2011, 5:40 IST
ಅಕ್ಷರ ಗಾತ್ರ

ಕುಶಾಲನಗರ: `ನೈಸರ್ಗಿಕ ಸಂಪನ್ಮೂಲಗಳು ಜನಸಮುದಾಯದ ಆಸ್ತಿಯೇ ಹೊರತು ಸರ್ಕಾರದ ಸ್ವತ್ತಲ್ಲ. ಇವುಗಳ ಸಂರಕ್ಷಣೆಯ ಹೊಣೆ ಆದಿವಾಸಿಗಳ ಮೇಲಿದೆ~. ಸರ್ಕಾರದ ಯೋಜನೆಗಳು ಸಮುದಾಯದ ಅಭ್ಯುದಯಕ್ಕೆ ವಿನಾಃ ಜನ ವಿರೋಧಿಯಾಗಬಾರದು ಎಂದು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ರಾಷ್ಟ್ರೀಯ ಚಳವಳಿಗಾರ ದೆಹಲಿಯ ಪ್ರಫುಲ್ಲ ಸಮಂತ ರೇ ಸೋಮವಾರ ಕುಶಾಲನಗರದಲ್ಲಿ ಹೇಳಿದರು.

ರಾಷ್ಟ್ರೀಯ ಆದಿವಾಸಿ ಆಂದೋಲನ, ಕುಶಾಲನಗರ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ (ಕಾರ್ಡ್), ಕೊಡಗು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ,  ಲೋಕಶಕ್ತಿ ಅಭಿಯಾನ ಸೇರಿದಂತೆ ದೇಶದ ವಿವಿಧ ಸಮುದಾಯ ಹಕ್ಕುಗಳ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕುಶಾಲನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕಾಲದ ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ -2011 ದಲ್ಲಿ  `ಸಮುದಾಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಜಾಗತೀಕರಣದ ಸವಾಲುಗಳು~ ಕುರಿತು ನಡೆದ ಚರ್ಚೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆದಿವಾಸಿ ಚಳವಳಿಗಾರ ದೆಹಲಿಯ ಶ್ರೀಧರ್ ಮಾತನಾಡಿ, ಆದಿವಾಸಿಗಳು ನೆಲ, ಜಲ, ಪರಿಸರದಂತಹ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸರ್ಕಾರವನ್ನು ನಂಬದೇ, ಉಳಿವಿಗೆ ಜನ ಸಮುದಾಯ ಸಂಘಟಿತ ಹೋರಾಟ ನಡೆಸಬೇಕಿದೆ ಎಂದರು.

ಆದಿವಾಸಿ ಹೋರಾಟಗಾರ ಶ್ರೀಧರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನದ ಶಕ್ತಿಯನ್ನು ಹೀನಗೊಳಿಸಿ ಸರ್ಕಾರಿ ಆಸ್ತಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ಅವುಗಳ ಕೈಗೊಂಬೆಗಳಾಗಿವೆ. ಹೀಗಾಗಿ ಕಳೆದ 20 ವರ್ಷಗಳಲ್ಲಿ ಒರಿಸ್ಸಾ ರಾಜ್ಯವೊಂದರಲ್ಲೇ 6 ಲಕ್ಷ ಎಕರೆ ಜಾಗವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ ಎಂದರು.

ಹುಣಸೂರು `ಡೀಡ್~ ಸಂಸ್ಥೆಯ ನಿರ್ದೇಶಕ ಎಸ್.ಶ್ರೀಕಾಂತ್, ಕರ್ನಾಟಕದಲ್ಲಿ ಆದಿವಾಸಿಗಳನ್ನು ಪ್ರತಿನಿಧಿಸುವ 15 ಮಂದಿ ಎಂಎಲ್‌ಎಗಳು, ಐವರು ಎಂಎಲ್‌ಸಿಗಳು, ಇಬ್ಬರು ಎಂಪಿಗಳು ಈತನಕ ಆದಿವಾಸಿಗಳ ಏಳ್ಗೆ ಬಗ್ಗೆ ನಿರೀಕ್ಷಿತ ಪ್ರಮಾಣದಲ್ಲಿ ಶಾಸನ ಸಭೆಗಳಲ್ಲಿ ಧ್ವನಿ ಎತ್ತಿಲ್ಲ ಎಂದರು. ಆದಿವಾಸಿಗಳ ಹಕ್ಕುಗಳ ರಕ್ಷಣೆ ಮತ್ತು ಅರಣ್ಯ ಸಂರಕ್ಷಣೆ ದಿಸೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಆದಿವಾಸಿ ಪಾರ್ಲಿಮೆಂಟ್ ರಚನೆಯಾಗಬೇಕಿದೆ ಎಂದರು.

ಕೇರಳದ ಡಾ ಕೆ.ಮಕ್ಬೂಲ್ ಮಾತನಾಡಿ, ಕೇರಳದಲ್ಲಿ ಸಮುದ್ರತೀರದಲ್ಲಿ ನೆಲೆಸಿರುವ ಮೀನುಗಾರರ ಬದುಕು ಅತಂತ್ರವಾಗಿದೆ. ಅಲ್ಲಿನ ಸರ್ಕಾರಿ ಜಾಗದಲ್ಲಿ ಸತ್ತ ಹೆಣವನ್ನು ಹೂಳಲು ಜಾಗ ಸಿಗದೆ ಅಲ್ಲಿ ಆದಿವಾಸಿಗಳು ತಮ್ಮ ಗುಡಿಸಲುಗಳಲ್ಲಿ ಹೆಣವನ್ನು ಹೂಳಬೇಕಾದ ಪರಿಸ್ಥಿತಿ ಇದೆ ಎಂದರು. ಸರ್ಕಾರ ಸಮುದ್ರತೀರ ಜಾಗವನ್ನು ಶ್ರೀಮಂತರಿಗೆ ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಆದಿವಾಸಿಗಳು ಶೋಚನೀಯ ಸ್ಥಿತಿಯಲ್ಲಿ ಇದ್ದಾರೆ ಎಂದರು.

ಮಂಗಳೂರಿನ ಕರಾವಳಿ ಜನಸಮುದಾಯ ವೇದಿಕೆಯ ಸಂಚಾಲಕಿ ವಿದ್ಯಾ ದಿನಕರ್ , ಸರ್ಕಾರ ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ನಮ್ಮ ಅವಶ್ಯಕ ಸಂಪನ್ಮೂಲಗಳನ್ನು ಮಾರಾಟ ಮಾಡಲು ಬಿಡಬಾರದು ಎಂದರು.
ಅಶೋಕ್ ಚೌಧರಿ ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ದಿಸೆಯಲ್ಲಿ ಗ್ರಾಮಸಭೆಗಳನ್ನು ಗಟ್ಟಿಗೊಳಿಸುವ ಮೂಲಕ ನಮ್ಮ ಹೋರಾಟವನ್ನು ಮುನ್ನಡೆಸಬೇಕಿದೆ ಎಂದರು.

ಪ್ರೊ.ಮಾಧವನ್ ಮಾತನಾಡಿ, ಸರ್ಕಾರಕ್ಕಿಂತ ಜನರು ದೊಡ್ಡವರು, ಸರ್ಕಾರಕ್ಕೆ ಶ್ರೀಮಂತರು ಮತ್ತು ಹಣವೇ ಮುಖ್ಯವಾಗಿದೆ. ನಮ್ಮ ಸಂಪನ್ಮೂಲಗಳನ್ನು ಮಾರುವ ಹಕ್ಕು ಸರ್ಕಾರಕ್ಕಿಲ್ಲ ಎಂದು ಪ್ರತಿಪಾದಿಸಿದರು.

ಸಂಗಮದ ರಾಷ್ಟ್ರೀಯ ಸಂಚಾಲಕ ವಿ.ಎಸ್.ರಾಯ್‌ಡೇವಿಡ್, ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ.ರಾಜು, ತಾಲ್ಲೂಕು ಅಧ್ಯಕ್ಷರಾದ ಆರ್.ಕೆ.ಚಂದ್ರು, ಜೆ.ಕೆ.ರಾಮು, ಕುಡಿಯರ ಮುತ್ತಪ್ಪ, ವೆಂಕಟಸ್ವಾಮಿ, ಸಂಘದ ಜಿಲ್ಲಾ ಕಾರ್ಯದರ್ಶಿ ಪಿ.ಎಸ್.ಮುತ್ತ ಸೇರಿದಂತೆ ವಿವಿಧ ರಾಜ್ಯದ ಆದಿವಾಸಿ ಪ್ರಮುಖರು ಇದ್ದರು.

ಅರಣ್ಯ ಹಕ್ಕುಗಳ ಕಾಯ್ದೆ, ಸಮುದ್ರತೀರದ ಶಾಸನಗಳು, ಕಾಯ್ದೆಗಳು, ಸಮುದಾಯದ ಹಕ್ಕು ಗಳು, ಪ್ರವಾಸೋದ್ಯಮ ಮತ್ತು ಸಮು ದಾಯದ ಹಕ್ಕುಗಳು, ನೈಸರ್ಗಿಕ ಸಂಪ ನ್ಮೂಲಗಳ ಸಂರಕ್ಷಣೆ ಕುರಿತ ವಿಚಾರ ಗೋಷ್ಠಿಗಳು ನಡೆದವು.

ಪ್ರಮುಖರಾದ ಜೆ.ಕೆ.ತಿಮ್ಮ, ರೋಮ, ಜೆ.ಕೆ.ರಾಮು, ಕುಮಾರ್, ಮಮತಾ ದಾಸ್, ಗುಮನ್ ಸಿಂಗ್, ಆರ್.ಶ್ರೀಧರ್ ವಿಚಾರ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT