ರಾಜರಾಜೇಶ್ವರಿ ನಗರ: ಹೆಮ್ಮಿಗೆಪುರ ಸಮೀಪದ ವರಾಹಸಂದ್ರದ ಹತ್ತಾರು ಎಕರೆಯಲ್ಲಿರುವ ಮಾವಿನ ಮರಗಳನ್ನು ನೈಸ್ ಸಂಸ್ಥೆಯವರು ನೆಲಕ್ಕುರುಳಿಸುತ್ತಿದ್ದಾರೆ. ಅದನ್ನು ತಡೆಯಲು ಹೋದರೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿ ನೂರಾರು ರೈತರು ಭಾನುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ನೈಸ್ ವಿರೋಧಿ ವೇದಿಕೆ ಅಧ್ಯಕ್ಷ ಪಂಚಲಿಂಗಯ್ಯ ಮಾತನಾಡಿ, ಗೂಂಡಾಗಳ ಜೊತೆ ಪೊಲೀಸರು ಸಹ ಕೈಜೋಡಿಸಿ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
‘ಇನ್ನು ಮುಂದೆ ನೈಸ್ ಗೂಂಡಾಗಳು ರೈತರ ಮೇಲೆ ಹಲ್ಲೆ ನಡೆಸಲು ಬಂದರೆ ರಕ್ತದ ಕೋಡಿ ಹರಿಯುತ್ತದೆ’ ಎಂದು ಎಚ್ಚರಿಕೆ ನೀಡಿದರು. ‘ರೈತರ ಮೇಲೆ ಹೂಡಿರುವ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಅಕ್ರಮವಾಗಿ ರೈತರ ಭೂಮಿಗಳನ್ನು ವಶಪಡಿಸಿಕೊಳ್ಳಲು ಮುಂದಾದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದರು. ನೊಂದ ರೈತರಾದ ಮಹಮದ್ಷರೀಪ್, ಬಸಪ್ಪ, ಉಮೇಶ್, ಮಾರಪ್ಪ, ನಂಜಪ್ಪ ಹಾಗೂ ಇತರರು ನೈಸ್ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ರೈತ ಮುಖಂಡರಾದ ಸಂತೋಷ್, ಗಾರ್ಡನ್ ನಾಗರಾಜ್, ಗ್ರಾ.ಪಂ. ಅಧ್ಯಕ್ಷ ಈರಯ್ಯ, ಮಾಜಿ ಸದಸ್ಯ ದೇವರಾಜು ಸೇರಿದಂತೆ ಹಲವಾರು ರೈತರು ಮಾತನಾಡಿದರು.