ಕಾರವಾರ: `ನೂರೋ, ಐನೊರೋ ರೂಪಾಯಿ ವೋಟು ಮಾರಿಕೊಂಡರೆ ಭ್ರಷ್ಟರು ಅಧಿಕಾರಕ್ಕೆ ಬರುತ್ತಾರೆ. ಎಚ್ಚರ, ಎಚ್ಚರ...' ಹೀಗೆ ಬೀದಿನಾಟಕ ತಂಡದ ಕಲಾವಿದರು ಹೇಳುತ್ತಿದ್ದರೆ ಸುತ್ತಲೂ ನೆರೆದ ಸಾರ್ವಜನಿಕರು ಕುತೂಹಲ ಭರಿತರಾಗಿ ಈ ಮಾತನ್ನು ಕೇಳುತ್ತಿದ್ದರು.
ಮತದಾನದ ಕುರಿತು ಜಾಗೃತಿ ಮೂಡಿಸಲು ವಾರ್ತಾ ಇಲಾಖೆ ನಗರದ ಸುಭಾಷ್ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡ ಬೀದಿ ನಾಟಕ ಮತದಾರರ ಮನಮುಟ್ಟುವಂತಿತ್ತು.
ಮತಪಟ್ಟಿಯಲ್ಲಿ ಹೆಸರು ಸೇರಿಸುವುದು, ಮತದಾರರ ಚೀಟಿ ಪಡೆದುಕೊಂಡ ನಂತರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಏನು ಮಾಡಬೇಕು ಎನ್ನುವುದನ್ನು ತಾಲ್ಲೂಕಿನ ಅಮದಳ್ಳಿಯ ಬಂಟದೇವ ಯುವಕ ಸಂಘದ ಕಲಾವಿದರು ಹಾಡು, ನೃತ್ಯದ ಮೂಲಕ ಹೇಳಿದರು.
ಕಣದಲ್ಲಿದ್ದ ಅಭ್ಯರ್ಥಿ ಮತದಾರರಿಗೆ ಹಣ, ಹೆಂಡ, ಸೀರೆಯ ಆಮಿಷವೊಡ್ಡುವುದು, ಕೆಲ ಮತದಾರರು ಹಣಕ್ಕಾಗಿಯೇ ಅಭ್ಯರ್ಥಿಗಳಲ್ಲಿ ಬೇಡಿಕೆ ಇಡುವಂತಹ ಸನ್ನೀವೇಶಗಳನ್ನು ಕಲಾವಿದರು ಕಣ್ಣಿಗೆ ಕಟ್ಟುವಂತೆ ಎದುರು ಪ್ರದರ್ಶಿಸಿದರು.
ವೋಟಿಗಾಗಿ ನೋಟು ತೆಗೆದುಕೊಳ್ಳಬಾರದು, ಹೆಂಡಕ್ಕೆ ನಮ್ಮ ಮತ ಮಾರಿಕೊಳ್ಳಬಾರದು ಎಂದು ಕಲಾವಿದರು ಹೇಳುತ್ತಿದ್ದಾಗ ಸ್ಥಳದಲ್ಲಿ ನೆರೆದ ನೂರಾರು ಸಾರ್ವಜನಿಕರು ವಿಷಯದ ಗಂಭೀರತೆ ಅರಿತುಕೊಂಡು ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಬ್ರಾಯ ಕಾಮತ್ ಜಾಥಾಕ್ಕೆ ಚಾಲನೆ ನೀಡಿದರು.ತಹಶೀಲ್ದಾರ್ ಸಾಜಿದ್ ಮುಲ್ಲಾ, ವಾರ್ತಾಧಿಕಾರಿ ಶಫಿ ಸಾದುದ್ದೀನ್ ಹಾಜರಿದ್ದರು.