ಲಖನೌ (ಐಎಎನ್ಎಸ್): ನವದೆಹಲಿಯಲ್ಲಿ ಶನಿವಾರ ಜರುಗಿದ ವಿಚಾರ ಸಂಕಿರಣವೊಂದರಲ್ಲಿ `ಶೇ 90ರಷ್ಟು ಭಾರತೀಯರು ಮೂರ್ಖರು' ಎಂದು ಹೇಳಿದ್ದ ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರಿಗೆ ಇಲ್ಲಿನ ಇಬ್ಬರು ವಿದ್ಯಾರ್ಥಿಗಳು ನೋಟಿಸ್ ನೀಡಿದ್ದಾರೆ.
ನ್ಯಾ. ಕಟ್ಜು ಅವರ ಹೇಳಿಕೆಯು ಅವಮಾನಕಾರಿಯಾಗಿದ್ದು, ತಮಗೆ ನೋವುಂಟು ಮಾಡಿದೆ. ಇದರಿಂದ ಭಾರತಕ್ಕೆ ಮತ್ತು ಭಾರತೀಯರ ಆತ್ಮಗೌರವಕ್ಕೆ ಧಕ್ಕೆಯುಂಟಾಗಿದೆ ಎಂದು ಕಾನೂನು ವಿದ್ಯಾರ್ಥಿ ತನ್ಯಾ ಠಾಕೂರ್ ಮತ್ತು ಅವರ ಸಹೋದರ 11ನೇ ತರಗತಿ ವಿದ್ಯಾರ್ಥಿ ಆದಿತ್ಯ ಠಾಕೂರ್
ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ.
`ಜವಾಬ್ದಾರಿಯುತ ಸ್ಥಾನದಲ್ಲಿರುವ ಕಟ್ಜು ಅವರು ವಿವೇಚನೆಯಿಂದ ಹೇಳಿಕೆ ನೀಡಬೇಕು. ಇಂತಹ ಹೇಳಿಕೆಯಿಂದ ಆಗುವ ಪರಿಣಾಮದ ಅರಿವು ಅವರಿಗೆ ಇರಬೇಕಿತ್ತು. ಅವರು ಒಂದು ತಿಂಗಳ ಒಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಕ್ಷಮೆ ಕೋರದಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ' ಎಂದು ಈ ವಿದ್ಯಾರ್ಥಿಗಳು ಹೇಳಿದ್ದಾರೆ.