ನ್ಯಾಮತಿ: ಗ್ರಾಮದ ಗ್ರಾಮ ಪಂಚಾಯ್ತಿ ಕಚೇರಿಯ ಪಿಡಿಒ ಮತ್ತು ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಹೊನ್ನಾಳಿ ತಾಲ್ಲೂಕು ಇಒ ಹುಲಿರಾಜ್ ತರಾಟೆ ತೆಗೆದುಕೊಂಡ ಪ್ರಕರಣ ಗುರುವಾರ ನಡೆಯಿತು.
ವಿವರ: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶೌಚಾಲಯ-ವಸತಿ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಲ್ಲಿ ಕೆಲವರಿಗೆ ಅನುದಾನ ನೀಡಿ, ಮತ್ತೆ ಕೆಲವರಿಗೆ ಅನುದಾನ ನೀಡಲು ತಾರತಮ್ಯ ಮಾಡುತ್ತಿರುವುದು, ಸಿಬ್ಬಂದಿ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡುತ್ತಿಲ್ಲ ಎಂದು ದೂರಿ ಸದಸ್ಯ ಪಿ. ಚಂದ್ರಶೇಖರ್ ನೇತೃತ್ವದಲ್ಲಿ ಫಲಾನುಭವಿಗಳ ಸಭೆಯನ್ನು ಬೆಳಿಗ್ಗೆ ಕರೆಯಲಾಗಿತ್ತು.
ಈ ಹಿನ್ನೆಲೆಯಲ್ಲಿ ಸಂಜೆ ಕಚೇರಿಗೆ ಆಗಮಿಸಿದ ಇಒ ಇಂದಿರಾ ಆವಾಸ್, ಕೇಂದ್ರ ಸರ್ಕಾರದ ಯೋಜನೆಯ ಶೌಚಾಲಯ ನಿರ್ಮಾಣದ ಅನುದಾನ ಬಿಡುಗಡೆ, ಸಿಬ್ಬಂದಿಗಳ ಕಡತಗಳನ್ನು ಪರಿಶೀಲಿಸಿ ಹಳೆ ಮನೆಗಳಿಗೆ ಹಣ ಬಿಡುಗಡೆ, ಜಿಪಿಎಸ್ ಸರಿಯಾಗಿ ದಾಖಲಿಸದೆ ಇರುವುದು, ಅನುದಾನ ಬಿಡುಗಡೆಯಲ್ಲಿ ತಾರತಮ್ಯ ನಡೆದಿರುವುದು, ಶೌಚಾಲಯ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಲ್ಲಿ ವಿಳಂಬ, ಹಾಜರಿ ಪುಸ್ತಕವನ್ನು ದಿನಗೂಲಿ ನೌಕರ ತಿದ್ದಿ ಸಹಿ ಮಾಡಿರುವುದು, ಮೇಲ್ನೋಟಕ್ಕೆ ನಿಜವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಪಿಡಿಒ ಮತ್ತು ಕಾರ್ಯದರ್ಶಿಗೆ ನೋಟಿಸ್ ನೀಡುವುದಾಗಿ ತಿಳಿಸಿದರು.
ಗ್ರಾಮ ಪಂಚಾಯ್ತಿ ಕಡತ, ಅನುದಾನ ಬಿಡುಗಡೆ, ಸಿಬ್ಬಂದಿ ನೇಮಕಾತಿ ಕಾನೂನು ಬದ್ದವಾಗಿಲ್ಲ ಇದಕ್ಕೆಲ್ಲಾ ಅಧ್ಯಕ್ಷರು ಮತ್ತು ಪಿಡಿಒ, ಕಾರ್ಯದರ್ಶಿ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷ ಜೆ. ರಾಜು, ಪಿಡಿಒ ಜಿ.ಬಿ. ವಿಜಯಕುಮಾರ್, ಲೆಕ್ಕ ಪರಿಶೋಧಕಿ ಜ್ಯೋತಿಶೆಟ್ಟಿ , ಸದಸ್ಯರಾದ ಸಿ. ಜಗದೀಶ್, ಎನ್.ಎಚ್. ಸವಿತಾ, ಎಂ.ಯು. ನಟರಾಜ, ಸತೀಶ್, ಸುದಾ, ಸುನಿತಾ, ವೀರಣ್ಣ ಹಾಗೂ ಸಾರ್ವಜನಿಕರು ಇದ್ದರು.