ಹಿರೇಕೆರೂರ: ತಾಲ್ಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಸಮರ್ಪಕವಾಗಿ ಪಡಿತರ ವಿತರಣೆ ಆಗುತ್ತಿಲ್ಲ, ಅರ್ಹರಿಗೆ ಪಡಿತರ ಕಾರ್ಡ್ ದೊರಕಿಲ್ಲ ಎಂದು ಆರೋಪಿಸಿ ಸ್ಥಳೀಯ ರೈತಸಂಘದ ಕಾರ್ಯಕರ್ತರು ಶುಕ್ರವಾರ ಗ್ರಾಮದ ನ್ಯಾಯಬೆಲೆ ಅಂಗಡಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದ ರೈತಸಂಘದ (ಪ್ರೊ.ನಂಜುಂಡಸ್ವಾಮಿ ಬಣ) ಅಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ, `ಗ್ರಾಮದಲ್ಲಿ ಅರ್ಹ ಬಡವರಿಗೆ ಪಡಿತರ ಚೀಟಿ ದೊರಕಿಲ್ಲ, ಕಡು ಬಡವರಿಗೆ ಎಪಿಎಲ್ ಕಾರ್ಡ್ ನೀಡಲಾಗಿದೆ. ಪಡಿತರ ಸಕಾಲದಲ್ಲಿ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ, ಇದರಿಂದ ಬಡವರು ಮತ್ತು ದುರ್ಬಲ ವರ್ಗದ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾ~ೆ ಎಂದು ಆರೋಪಿಸಿದರು.
ಅರ್ಹರಿಗೆ ಪಡಿತರ ವಿತರಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರತಿ ಪಡಿತರ ಕಾರ್ಡುದಾರರಿಂದ ಸಂಗ್ರಹಿಸಿರುವ ತಲಾ ರೂ.100ನ್ನು ಕೂಡಲೇ ವಾಪಸು ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಆರ್.ಎನ್. ಗಾಳೇರ, ಶಿವಯೋಗೆಪ್ಪ ದೀವಿಗಿಹಳ್ಳಿ, ಹನುಮಂತಪ್ಪ ಕರಿಯಣ್ಣನವರ, ಬಸವರಾಜ ದೀವಿಗಿಹಳ್ಳಿ, ಹನುಮಂತಪ್ಪ ಮೇಗಳಮನಿ, ಕೆ.ಸಿ.ಹಾರೋಗೊಪ್ಪ, ಮಂಜಪ್ಪ ಉಪ್ಪಾರ, ಬಸವರಾಜ ಎಲಿಗಾರ ಮೊದಲಾದವರು ಪ್ರತಿಭಟನೆಯಲ್ಲಿದ್ದರು.