ನವದೆಹಲಿ (ಪಿಟಿಐ): ಸಲಿಂಗರತಿ ಅಪರಾಧ ಎಂಬ ಮಹತ್ವದ ತೀರ್ಪು ನೀಡಿದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಬುಧವಾರ ನಿವೃತ್ತರಾದರು.
ಸುಪ್ರೀಂಕೋರ್ಟ್ನ ಕ್ರಿಯಾಶೀಲ ಮತ್ತು ದಿಟ್ಟ ನ್ಯಾಯಮೂರ್ತಿ ಎಂದೇ ಹೆಸರಾಗಿದ್ದ ಸಿಂಘ್ವಿ, ಹಲವು ಪ್ರಕರಣಗಳಲ್ಲಿ ಸರ್ಕಾರ ತಲ್ಲಣಗೊಳ್ಳುವಂತಹ ತೀರ್ಪು ನೀಡಿದ್ದರು.
ಸುಪ್ರೀಂಕೋರ್ಟ್ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಅವರು, ಹಲವು ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸಿ 2ಜಿ ತರಂಗಾಂತರ ಪರವಾನಗಿ ರದ್ದು ಸೇರಿದಂತೆ ಮಹತ್ವದ ತೀರ್ಪುಗಳನ್ನು ನೀಡಿದ್ದರು.
ಕಾರುಗಳ ಮೇಲೆ ವಿವೇಚನಾರಹಿತ ಕೆಂಪು ದೀಪ ಬಳಕೆಗೆ ನಿರ್ಬಂಧ ಹೇರುವ ತೀರ್ಪನ್ನು ಮಂಗಳವಾರವಷ್ಟೇ ನೀಡಿದ್ದ ಸಿಂಘ್ವಿ, ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು.
ಸಲಿಂಗರತಿ ಕಾನೂನಬಾಹಿರ ಎಂಬ ಅವರ ಕೊನೆಯ ತೀರ್ಪು ಟೀಕೆಗೂ ಕಾರಣವಾಗಿದೆ. ಸಾಂವಿಧಾನಿಕ ಮೌಲ್ಯಗಳನ್ನು ವಿಸ್ತರಿಸುವ ಅವಕಾಶವೊಂದು ಈ ನ್ಯಾಯ ಮೂರ್ತಿಯವರಿಂದಾಗಿ ತಪ್ಪಿ ಹೋಯಿತು ಎಂದು ಹಿರಿಯ ನ್ಯಾಯವಾದಿಗಳು ಸೇರಿದಂತೆ ಹಲವರು ಟೀಕಿಸಿದ್ದಾರೆ.