ನವದೆಹಲಿ (ಪಿಟಿಐ/ಐಎಎನ್ಎಸ್): `ನ್ಯಾಯಾಂಗ ಮಾತ್ರವಲ್ಲ; ಉಳಿದ ಕ್ಷೇತ್ರದವರನ್ನು ಕೂಡ ಕೇಂದ್ರ ಹಾಗೂ ರಾಜ್ಯ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಬಹುದು' ಎಂದು ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳನ್ನು ಮಾತ್ರ ಕೇಂದ್ರ ಮಾಹಿತಿ ಆಯುಕ್ತ (ಸಿಐಸಿ)ರನ್ನಾಗಿ ಮಾಡಬಹುದು ಎಂದು ಈ ಮೊದಲು ದೋಷಪೂರಿತ ತೀರ್ಪು ನೀಡಿದ್ದಾಗಿಯೂ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ಕಳೆದ ವರ್ಷ ಸೆಪ್ಟೆಂಬರ್ 13ರಂದು ಸುಪ್ರೀಂಕೋರ್ಟ್ ನೀಡಿದ್ದ ಈ ತೀರ್ಪನ್ನು ಪುನರ್ಪರಿಶೀಲಿಸುವಂತೆ ಕೋರಿ ಕೇಂದ್ರವು ಕೋರ್ಟ್ಗೆ ಮನವಿ ಸಲ್ಲಿಸಿತ್ತು.
`ಈ ತೀರ್ಪು ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ' ಎಂದು ಮನವಿಯಲ್ಲಿ ಹೇಳಲಾಗಿತ್ತು. ವಿವಾದಿತ ತೀರ್ಪನ್ನು ವಾಪಸ್ ಪಡೆದ ನ್ಯಾಯಮೂರ್ತಿಗಳಾದ ಎ.ಕೆ.ಪಟ್ನಾಯಕ್ ಹಾಗೂ ಎ.ಕೆ.ಸಿಕ್ರಿ ಅವರಿದ್ದ ಪೀಠ, `ಇದು ದೋಷಪೂರ್ಣ ತೀರ್ಪು. ನಾವು ಇದನ್ನು ರದ್ದು ಮಾಡುತ್ತೇವೆ' ಎಂದು ಹೇಳಿತು.
ಸಿಐಸಿ ನೇಮಕಾತಿಯಲ್ಲಿ ವಿಜ್ಞಾನ, ತಂತ್ರಜ್ಞಾನ, ಮಾಧ್ಯಮ ಹಾಗೂ ಇತರ ಕ್ಷೇತ್ರಗಳಿಗೆ ಸೇರಿದ ತಜ್ಞರನ್ನುಪರಿಗಣಿಸಬೇಕು ಎಂದೂ ಪೀಠ ಸ್ಪಷ್ಟಪಡಿಸಿದೆ.