ತುಮಕೂರು: ‘ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರನ್ನು ಖುಲಾಸೆಗೊಳಿಸುವ ಮೂಲಕ ತಪ್ಪಿತಸ್ಥರು ತಲೆ ಎತ್ತಿಕೊಂಡು ತಿರುಗಾಡಲು ನ್ಯಾಯಾಂಗ ವ್ಯವಸ್ಥೆ ಅನುವು ಮಾಡಿಕೊಟ್ಟಿದೆ’ ಎಂದು ಜಿಲ್ಲಾಧಿಕಾರಿ ಕೆ.ಸತ್ಯಮೂರ್ತಿ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ‘ನಿರ್ಲಕ್ಷಿತ ಮಹಿಳೆಯರ ಮೇಲಿನ ದೌರ್ಜನ್ಯ, ಕಾನೂನು ಹಾಗೂ ಸಾಮಾಜಿಕ ದೃಷ್ಟಿಕೋನಗಳು’ ಕುರಿತ ನ್ಯಾಯಾಧೀಶರ ಸಂವೇದನಾ ಕಾರ್ಯಾಗಾರದಲ್ಲಿ ಮಾತನಾಡಿದರು.
‘ತಪ್ಪಿತಸ್ಥರನ್ನು ಖುಲಾಸೆ ಮಾಡುತ್ತಲೇ ಇದ್ದರೆ ಜನ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವುದು ನಿಶ್ಚಿತ. ಹಾಗಾಗಿ ನ್ಯಾಯಾಧೀಶರು ಕಟ್ಟುನಿಟ್ಟಿನ ಮನಸ್ಥಿತಿಯಿಂದ ಕಾರ್ಯನಿರ್ವಹಿಸಿ, ಅಪರಾಧಿಗಳು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಖುಲಾಸೆ ಮಾಡುವುದನ್ನು ನಿಲ್ಲಿಸದಿದ್ದರೆ ಜನರ ದೃಷ್ಟಿಯಲ್ಲಿ ಕೆಟ್ಟವರಾಗಬೇಕಾಗುತ್ತದೆ. ನ್ಯಾಯಾಧಿೀಶರು ಅಂತಃಸಾಕ್ಷಿಗೆ ಸರಿಯಾಗಿ ಕೆಲಸ ಮಾಡಬೇಕು’ ಎಂದರು.
ಮರಳು ಗಣಿಗಾರಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಮಾಧ್ಯಮಗಳು ಬರೆಯುತ್ತವೆ. ಅಕ್ರಮ ಮರಳು ಸಾಗಿಸುವವರನ್ನು ಬಂಧಿಸಿ, ಲಾರಿಗಳನ್ನು ಮುಟ್ಟುಗೋಲು ಹಾಕಿಕೊಂಡರೆ ಮಾರನೇ ದಿನವೇ ಲಾರಿಗಳು ರಸ್ತೆಗಿಳಿಯುತ್ತವೆ. ಬಂಧಿತರು ಜಾಮೀನು ಪಡೆದು ಹೊರಬಂದು, ರಾಜಾರೋಷವಾಗಿ ಓಡಾಡುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಚಿನ್ನಕ್ಕೆ ಕ್ಷಣಾರ್ಧದಲ್ಲಿ ಹಣ ನೀಡುವ ಸಂಸ್ಥೆಗಳ ಪ್ರಲೋಭನೆಗೆ ಒಳಗಾಗಿ ಸರಗಳ್ಳರು ದುಷ್ಕೃತ್ಯದಲ್ಲಿ ಭಾಗಿಯಾಗುತ್ತಾರೆ. ಸಿಕ್ಕಿಬೀಳುವ ಕಳ್ಳರನ್ನು ಬಂಧಿಸಿದರೆ ವಾರದಲ್ಲೇ ಜಾಮೀನು ಪಡೆದು ಹೊರಬರುತ್ತಾರೆ. ಕದ್ದ ಚಿನ್ನದಲ್ಲಿ ಶೇ 10ರಷ್ಟು ಖರ್ಚು ಮಾಡಿದರೆ ಜಾಮೀನು ಸಿಗುತ್ತದೆ. ಹೀಗೆ ಬಂದವರು ಮತ್ತೆ ಹಳೆಯ ಚಾಳಿ ಮುಂದುವರೆಸುತ್ತಾರೆ. ಹಾಗಾಗಿ ತಪ್ಪಿತಸ್ಥರಿಗೆ ಕಠಿಣ ಸಜೆ, ದಂಡ ವಿಧಿಸಬೇಕು ಎಂದು ಕೋರಿದರು.
ಕೆಲ ಪ್ರಕರಣಗಳಲ್ಲಿ ಅಧಿಕಾರಿಗಳು ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ಇದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಕಷ್ಟಕರವಾಗಿದೆ. ಅಧಿಕಾರಿಗಳ ಮೇಲೆ ಸುಳ್ಳು ಕೇಸು ದಾಖಲಿಸುವವರಿಗೆ ನ್ಯಾಯಾಲಯ ದಂಡ, ಸಜೆ ವಿಧಿಸಬೇಕು ಎಂದು ಮನವಿ
ಮಾಡಿದರು.
ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಕಾರ್ಯಾಗಾರ ಉದ್ಘಾಟಿಸಿದರು. ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಪ್ರಭಾಕರ ಶಾಸ್ತ್ರಿ, ಕರ್ನಾಟಕ ಹೆಲ್ತ್ ಪ್ರೊಮೋಷನ್ ಟ್ರಸ್ಟ್ ಅಧ್ಯಕ್ಷ ಅಶೋಕಾನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ಗುಪ್ತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.