ಈ ಹಿಂದೆ ಇಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಎಸ್. ಶ್ರೀಧರ್ ಅವರನ್ನು ಕೆ.ಆರ್.ಪೇಟೆಗೆ ವರ್ಗಾವಣೆ ಮಾಡಿದ ಮೇಲೆ ಇಲ್ಲಿಗೆ ಬೇರೆ ನ್ಯಾಯಾಧೀಶರ ನೇಮಕವಾಗಿಲ್ಲ. ಅಲ್ಲದೆ ಕೊಪ್ಪ ಮತ್ತು ಶೃಂಗೇರಿ ನ್ಯಾಯಾಲಯದ ನ್ಯಾಯಾಧೀಶರು ತರಬೇತಿಗೆ ಹೋಗಿರುವುದರಿಂದ ಎನ್.ಆರ್.ಪುರ ನ್ಯಾಯಾಲಯದ ಜತೆಗೆ ಈ ಎಲ್ಲಾ ನ್ಯಾಯಾಲಯದ ಉಸ್ತುವಾರಿಯನ್ನು ಚಿಕ್ಕಮಗಳೂರಿನ ನ್ಯಾಯಾಧೀಶರಿಗೆ ವಹಿಸಲಾಗಿದೆ. ಈ ಮೂರು ನ್ಯಾಯಾಲಯದಲ್ಲಿನ ಮೊಕದ್ದಮೆಗಳ ವಿಚಾರಣೆಯನ್ನು ಕೊಪ್ಪ ನ್ಯಾಯಾಲಯದಲ್ಲಿ ಗುರುವಾರ, ಶುಕ್ರವಾರ ಮತ್ತು ಶನಿವಾರ ನಡೆಸುವುದರಿಂದ ಅಲ್ಲಿಗೆ ವಕೀಲರು ಮತ್ತು ಕಕ್ಷಿದಾರರು ಹೋಗಬೇಕಾಗಿದೆ. ಅಲ್ಲದೆ ಸೋಮವಾರ, ಮಂಗಳವಾರ ಮತ್ತು ಬುಧವಾರ ಕಕ್ಷಿದಾರರು ಚಿಕ್ಕಮಗಳೂರಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.