ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರ ಮರು ನೇಮಕಕ್ಕೆ ಆದೇಶ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ಹಾಗೂ ಪಕ್ಷಪಾತ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಕಾಯಂ ನಿವೃತ್ತಿಗೊಳಿಸಲಾಗಿದ್ದ ಅಧೀನ ಕೋರ್ಟ್‌ಗಳ 10 ಮಂದಿ ನ್ಯಾಯಾಧೀಶರನ್ನು  ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಈ ಎಲ್ಲ ನ್ಯಾಯಾಧೀಶರಿಗೆ ಅವರು ನಿವೃತ್ತಿಯಾದ ದಿನದಿಂದ ಅನ್ವಯ ಆಗುವಂತೆ ಎಲ್ಲ ಸೌಲಭ್ಯಗಳನ್ನು ನೀಡುವಂತೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಆದೇಶಿಸಿದ್ದಾರೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಡಿ.ದಿನಕರ್ ಅವರ ಅವಧಿಯಲ್ಲಿ ಈ ನ್ಯಾಯಾಧೀಶರನ್ನು ಸೇವೆಯಿಂದ ನಿವೃತ್ತಿಗೊಳಿಸಿ 2009ರ ಮೇ 16ರಂದು ಆದೇಶ ಹೊರಡಿಸಲಾಗಿತ್ತು. `ಸಾರ್ವಜನಿಕ ಹಿತದೃಷ್ಟಿ~ಯಿಂದ ಈ ಆದೇಶ ಹೊರಡಿಸಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಹೈಕೋರ್ಟ್ ವಿಚಾರಣಾ ಸಮಿತಿ ನೀಡಿದ್ದ ವರದಿಯ ಆಧಾರದ ಮೇಲೆ ರಾಜ್ಯಪಾಲರು ಈ ಆದೇಶ ಹೊರಡಿಸಿದ್ದರು. ಈ ಆದೇಶ ಹಾಗೂ ನಂತರ ಹೊರಟ ಅಧಿಸೂಚನೆಗಳನ್ನು ನ್ಯಾಯಮೂರ್ತಿಗಳು ಈಗ ವಜಾಗೊಳಿಸಿದ್ದಾರೆ.

ಟಿ.ನಾಗಪ್ಪ (ಮೈಸೂರು), ರುದ್ರಮುನಿ ಬೈರನಪದಮಠ (ನಾಗಮಂಗಲ - ಮಂಡ್ಯ ಜಿಲ್ಲೆ), ಮಾರ್ತಾಂಡ (ಚಿಕ್ಕೋಡಿ- ಬೆಳಗಾವಿ), ಶಿವಾನಂದ ಧಾಗೆ (ಕಾರ್ಕಳ- ಉಡುಪಿ), ಅಲ್ತಾಸ್ (ಬೆಳಗಾವಿ), ಬಾಪೂಜಿ ಟಿ. ಚನಾಳ ಹಾಗೂ ಅನ್ವರ ಅನ್ಸಾರಿ (ಧಾರವಾಡ), ಲಕ್ಷ್ಮಿಕಾಂತ, ಸಿ.ಆರ್. ಜಾವೇದ್ ಪಾಷಾ ಹಾಗೂ ಮಹಾಂತಗೌಡ ಬಿರಾದಾರ (ಎಲ್ಲರೂ ಬೆಂಗಳೂರು) ಇವರು ಪುನಃ ನ್ಯಾಯಾಧೀಶರಾಗಿ ಮುಂದುವರಿಯಲಿದ್ದಾರೆ.

`ಶಾರ್ಟ್‌ಕಟ್~ ಪದ್ಧತಿ: `ಅಧೀನ ಕೋರ್ಟ್‌ಗಳ ನ್ಯಾಯಾಧೀಶರ ಬಗ್ಗೆ ವಿಚಾರಣೆ ನಡೆಸಲು 2005ರ ನ.28ರಂದು ಹೈಕೋರ್ಟ್‌ನಿಂದ ಸಮಿತಿ ರಚನೆಗೊಂಡಿತ್ತು. ಈ ಸಮಿತಿಯು ವರದಿ ನೀಡಿದೆ. ಆದರೆ ಈ ವರದಿಯ ಆಧಾರದ ಮೇಲೆ ಪ್ರಾಥಮಿಕ ತನಿಖೆ ನಡೆದರೂ, ತನಿಖಾ ವರದಿಯನ್ನು ಗೌಪ್ಯವಾಗಿ ನೀಡಲಾಗಿದ್ದರೂ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆದಿಲ್ಲ.

`ಇಲಾಖಾ ತನಿಖೆ ಅಥವಾ ವಿಚಾರಣೆಯನ್ನು ತಪ್ಪಿಸುವುದಕ್ಕೋಸ್ಕರ ಕಾಯಂ ನಿವೃತ್ತಿಯನ್ನು `ಶಾರ್ಟ್‌ಕಟ್~ ಪದ್ಧತಿಯಾಗಿ ಬಳಸಲಾಗಿದೆ. ಆದುದರಿಂದ ಈ ಅಧಿಸೂಚನೆ ರದ್ದುಗೊಳಿಸಲೇಬೇಕಾಗುತ್ತದೆ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಂಗ ಅಧಿಕಾರಿ ವಿಭಿನ್ನ: `ರಾಜ್ಯ ಸರ್ಕಾರಿ ಸೇವಾ ನಿಯಮದ 285 (4)ರ ಕಲಮಿನ ಅಡಿ `ಸಾರ್ವಜನಿಕ ಹಿತದೃಷ್ಟಿ~ಯ ಕಾರಣ ನೀಡಿ ಕಾಯಂ ನಿವೃತ್ತಿ ಆದೇಶ ಹೊರಡಿಸಲಾಗಿದೆ. ಆದರೆ ನ್ಯಾಯಾಂಗ ಅಧಿಕಾರಿಗಳನ್ನು ಸಾಮಾನ್ಯ ಸರ್ಕಾರಿ ನೌಕರರಂತೆ ಪರಿಗಣಿಸುವುದು ಸರಿಯಲ್ಲ. ನ್ಯಾಯಾಧೀಶರ ಮೇಲಿರುವ ಆರೋಪಗಳು ಸಾಬೀತು ಆಗುವವರೆಗೆ ಅವರನ್ನು ಈ ಕಲಮಿನ ಅಡಿ ನಿವೃತ್ತಿಗೊಳಿಸುವುದು ಉಚಿತವಲ್ಲ. ಈ ಕುರಿತು ಸುಪ್ರೀಂಕೋರ್ಟ್ ಕೂಡ `ಪ್ರಸಾದ್‌ಸಿಂಗ್ ವರ್ಸಸ್ ಸ್ಟೇಟ್ ಆಫ್ ಬಿಹಾರ್~ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ~ ಎಂದು ತೀರ್ಪಿನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಆದುದರಿಂದ ಅಧಿಸೂಚನೆಯು ಅಸಾಂವಿಧಾನಿಕವೂ, ಕಾನೂನು ಬಾಹಿರವೂ ಆಗಿದೆ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ 10 ನ್ಯಾಯಾಧೀಶರು ಸೇರಿದಂತೆ ಒಟ್ಟು 14 ನ್ಯಾಯಾಧೀಶರನ್ನು ಕಾಯಂ ನಿವೃತ್ತಿಗೊಳಿಸಲಾಗಿತ್ತು. ಆದರೆ ಇವರು ಮಾತ್ರ ಹೈಕೋರ್ಟ್ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಇವರಿಗೆ ಆದೇಶ ಅನ್ವಯ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT