ಬೆಂಗಳೂರು: `ನ್ಯಾಯದಾನ ದೈವಿಕ ಕಾರ್ಯವಾಗಿದ್ದು ನ್ಯಾಯಾಧೀಶರು ಮೌಲ್ಯಾಧಾರಿತ ತತ್ವಗಳನ್ನು ಅನುಸರಿಸಿ ಕಾರ್ಯ ನಿರ್ವಹಿಸಬೇಕು~ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಕರೆ ನೀಡಿದರು.
ಹೈಕೋರ್ಟ್ ಮತ್ತು ಕರ್ನಾಟಕ ನ್ಯಾಯಾಂಗ ಅಕಾಡೆಮಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `2008ರ ಪ್ರಥಮ ತಂಡದ ಸಿವಿಲ್ ನ್ಯಾಯಾಧೀಶರಿಗೆ ಒಂದು ವರ್ಷದ ತರಬೇತಿ ಕೋರ್ಸ್ನ ಸಮಾರೋಪ ಸಮಾರಂಭ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಗುರುವಂದನಾ ಕಾರ್ಯಕ್ರಮ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಕಾನೂನಿನ ತತ್ವಗಳ ಜತೆಗೆ ನ್ಯಾಯಾಧೀಶರು ಕೆಲವು ಮೌಲ್ಯಾಧಾರಿತ ತತ್ವಗಳನ್ನು ಅನುಸರಿಸುವ ಅವಶ್ಯಕತೆ ಇದೆ. ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅವರ ವರ್ತನೆ ಇರಬೇಕು. ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ದೃಢ ನಿರ್ಧಾರ ಮಾಡಬೇಕು. ಪ್ರಾಮಾಣಿಕತೆಯಿಂದ ತೀರ್ಪು ನೀಡಬೇಕು. ತಮ್ಮ ನಿರ್ಧಾರ ಯೋಗ್ಯವಾಗಿರಬೇಕು~ ಎಂದರು.
`ವಕೀಲರೊಂದಿಗೆ ನ್ಯಾಯಾಧೀಶರು ಸಂಪರ್ಕ ಹೊಂದುವುದು ತಪ್ಪಲ್ಲ. ಆದರೆ ಅದು ತೀರ್ಪಿನ ಮೇಲೆ ಪರಿಣಾಮ ಬೀರುವುದನ್ನು ಒಪ್ಪಲು ಸಾಧ್ಯವಿಲ್ಲ~ ಎಂದು ಹೇಳಿದರು. ನ್ಯಾಯಮೂರ್ತಿ ಕೆ.ಶ್ರೀಧರ ರಾವ್, `ಕಾನೂನಿನ ಜ್ಞಾನ ಹೊಂದದೆ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ~ ಎಂದರು.
ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್, ರಿಜಿಸ್ಟ್ರಾರ್ ಜನರಲ್ ಪಿ.ಕೃಷ್ಣಭಟ್, ಅಕಾಡೆಮಿಯ ನಿರ್ದೇಶಕ ಚೌಡಾಪುರ್ಕರ್ ಅರುಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.