ಬೆಂಗಳೂರು: ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಸಂಚರಿಸುವ ವಕೀಲ ಮತ್ತು ಕಕ್ಷಿದಾರರ ಅನುಕೂಲಕ್ಕಾಗಿ ಬಿಎಂಟಿಸಿಯು ಸೋಮವಾರ ಬಸ್ ಸೇವೆಯನ್ನು ವಿಧ್ಯುಕ್ತವಾಗಿ ಆರಂಭಿಸಿತು.
ನಗರದ ಮೆಯೋಹಾಲ್ ಕೋರ್ಟ್ನಲ್ಲಿ ನಡೆದ ಸಮಾರಂಭದಲ್ಲಿ ಬಸ್ ಸೇವೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ ಬಿಎಂಟಿಸಿ ಉಪಾಧ್ಯಕ್ಷ ಎಂ.ಕೃಷ್ಣಪ್ಪ, `ಬಿಎಂಟಿಸಿಯು ನೀಡುತ್ತಿರುವ ಉತ್ತಮ ಸೇವೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿದೆ ಎಂದರು.
ಈ ಸಾರಿಗೆ ಸೌಲಭ್ಯದಿಂದ ವಕೀಲರು ಮತ್ತು ಕಕ್ಷಿದಾರರು ಸ್ವಂತ ವಾಹನಗಳನ್ನು ಅವಲಂಬಿಸುವುದು ತಪ್ಪಲಿದೆ. ಅಲ್ಲದೆ, ನಗರದಲ್ಲಿ ಸುಗಮ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ~ ಎಂದು ಅವರು ಹೇಳಿದರು.
`ಮುಂದಿನ ದಿನಗಳಲ್ಲಿ ಯುರೋ-4 ಹವಾನಿಯಂತ್ರಿತ ಬಸ್ಗಳನ್ನು ಪೂರೈಸಲಾಗುವುದು~ ಎಂದು ಅವರು ಭರವಸೆ ನೀಡಿದರು. ಸದ್ಯಕ್ಕೆ ಈ ಮೂರು ಬಸ್ಗಳು ಮೆಯೋ ಹಾಲ್, ನಗರ ಸಿವಿಲ್ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ ಮತ್ತು ಹೈಕೋರ್ಟ್ಗಳ ನಡುವೆ ಸಂಚರಿಸಲಿವೆ. ನ್ಯಾಯಾಧೀಶ ಆರ್.ಬಿ.ಬೂದಿಹಾಳ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ ಇತರರು ಇದ್ದರು.