ಲೋಕಪಾಲ ಮಸೂದೆಗೆ ಬದ್ಧ- ಪ್ರಧಾನಿ ಸಿಂಗ್
ಅಮೃತಸರ (ಐಎಎನ್ಎಸ್): ಲೋಕಪಾಲ ಮಸೂದೆಗೆ ಸಂಸತ್ನಲ್ಲಿ ಅಡ್ಡಿಯಾಗಿದ್ದರೂ ಸಹ, ಪ್ರಬಲ ಲೋಕಪಾಲ ಮಸೂದೆ ಜಾರಿಗೆ ಯುಪಿಎ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಇಲ್ಲಿಗೆ ಆಗಮಿಸಿರುವ ಪ್ರಧಾನಿ ಸಿಂಗ್ ಅಮೃತಸರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದರು. ದೇಶದಲ್ಲಿ ಭ್ರಷ್ಟಾಚಾರ ದೊಡ್ಡ ಗಂಭೀರ ಸಮಸ್ಯೆಯಾಗಿದೆ. ಇದನ್ನು ನಿಗ್ರಹಿಸುವ ನಿಟ್ಟಿನಲ್ಲಿ ಪ್ರಬಲ ಲೋಕಪಾಲ ಮಸೂದೆಗೆ ತಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದರು.
`ಕೊಲವೆರಿ ಡಿ~ಗೆ ಮನಸೋತ ಬಿಜೆಪಿ
ಪಣಜಿ (ಪಿಟಿಐ): ಚುನಾವಣಾ ಪ್ರಚಾರಕ್ಕೆ ರಂಗು ತರಲು ಮತ್ತು ಮತದಾರರನ್ನು ತನ್ನತ್ತ ಸೆಳೆಯುವ ಯತ್ನವಾಗಿ ಬಿಜೆಪಿಯು ಜನಪ್ರಿಯ ಚಲನಚಿತ್ರ ಗೀತೆ `ಕೊಲವೆರಿ ಡಿ~ ಹಾಡನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.
ಹಿರಿಯ ಸಾಹಿತಿ ವಿಷ್ಣು ವಾಘ್ ಅವರು ಈಚೆಗೆ ಬಿಜೆಪಿ ಸೇರಿದ್ದು, ಕವಿತೆಯೊಂದನ್ನು ರಚನೆ ಮಾಡಿದ್ದಾರೆ. ಈ ಕವಿತೆಯನ್ನು `ಕೊಲವೇರಿ ಡಿ~ ಹಾಡಿನ ಸಂಗೀತಕ್ಕೆ ಅಳವಡಿಸಲಾಗಿದ್ದು, ಕೊಂಚ ಬದಲಾವಣೆ ಮಾಡಿ `ಕೊಲವೇರಿ ಡಿ~ ಬದಲಿಗೆ ಬಿಜೆಪಿ ಚಿನ್ಹೆ ಕಮಲವನ್ನು ಒಳಗೊಂಡಂತೆ `ಕಮಲವಾರಿ ಡಿ~ ಎನ್ನುವ ಹಾಡನ್ನು ರಚಿಸಲಾಗಿದೆ. ಪ್ರಚಾರದ ವೇಳೆ ಹಾಡನ್ನು ಬಳಸಿಕೊಳ್ಳಲು ಸಿದ್ಧತೆ ನಡೆದಿದೆ.
ಮಾರ್ಚ್ 3ರಂದು ಗೋವಾದಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣಾ ಪ್ರಚಾರ ಆರಂಭವಾಗಿದೆ. ಇದಕ್ಕಾಗಿ `ಜನ ಸಂಪರ್ಕ ಅಭಿಯಾನ~ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುತ್ತಿದೆ.
ನವಜೋತ್ ಸಿಂಗ್ ಸಿಧು ಪತ್ನಿ ಚುನಾವಣೆ ಕಣಕ್ಕೆ
ಅಮೃತಸರ (ಪಿಟಿಐ): ಕ್ರಿಕೆಟಿಗ ಹಾಗೂ ಸಂಸದ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಅವರು ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ.
ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿ ಸಿಂಪರ್ಪ್ರೀತ್ ಕೌರ್ ಬಾಟಿಯಾ ಪಕ್ಷೇತರ ಅಭ್ಯರ್ಥಿಯಾಗಿದ್ದು, ನವಜೋತ್ ಕೌರ್ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೊದಲಿಗೆ ಸಿಂಪರ್ಪ್ರೀತ್ ಕೌರ್ ಅವರಿಗೆ ಟಿಕೆಟ್ ನೀಡಿತ್ತಾದರೂ, ಕೊನೆ ಗಳಿಗೆಯಲ್ಲಿ ಟಿಕೆಟ್ ನಿರಾಕರಿಸಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.