ಮಹಾಲಿಂಗಪುರ: ಭಕ್ತಿ, ಭಾವ ಹಾಗೂ ಭಾವೈಕ್ಯದ ಸಂಗಮವೆಂದೇ ಬಿಂಬಿಸಲಾಗುವ ಇಲ್ಲಿಯ ಮಹಾಲಿಂಗೇಶ್ವರ ಜಾತ್ರೆಯಲ್ಲಿಯ ರಥ ಸಹಸ್ರ ಸಹಸ್ರ ಭಕ್ತರ ಹರ್ಷೋದ್ಘಾರಗಳ ಮಧ್ಯ ಸಾಗಿತು. ಜಾತ್ರೆಯ ಸಕಲ ಪರಂಪರೆಗಳಿಗೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ರಥದ ಚಾಲನೆಗೆ ಆನುಮತಿ ನೀಡಿದರು. ರಥ ತನ್ನ ಪ್ರಯಾಣವನ್ನು ಆರಂಭಿಸುವ ಕ್ಷಣದಲ್ಲಿ ಹಾಜರಿದ್ದ ಸಾವಿರಾರು ಭಕ್ತರು ಕ್ಷಣದ ಮಹಿಮೆ ಸವಿದರು.
ಲೂಟಿ!: ಸಂಪ್ರದಾಯದಂತೆ ರಥದ ಚಾಲನೆಗೂ ಮುನ್ನ ಶ್ರೀಮಠದ ಪಾದಗಟ್ಟೆಯ ಎದುರು ಹರಿವಾಣ ಕಟ್ಟೆಯನ್ನು ಅಲಂಕೃತವಾಗಿ ನಿರ್ಮಿಸಿ ಅದನ್ನು ಲೂಟಿ ಮಾಡುವ ಕಾರ್ಯಕ್ರಮ ನಡೆಯಿತು.
ನೂರಾರು ರೈತರು ತಮ್ಮ ಹೊಲದಲ್ಲಿ ಬೆಳೆದ ಗೋವಿನ ಜೋಳ, ಬಾಳೆ, ಕಬ್ಬು ಹಾಗೂ ಇನ್ನಿತರ ಧವಸ ಧಾನ್ಯಗಳನ್ನು ತಂದು ಪಾದಗಟ್ಟೆಯ ಎದುರು ನಿರ್ಮಿಸಿದ ಹರಿವಾಣ ಕಟ್ಟೆಯ ಹಂದರಕ್ಕೆ ತೂಗು ಹಾಕಿದರು. ಮಠಾಧಿಪತಿಗಳು ಮಂಗಳಾರತಿ ಮಾಡಿದ ನಂತರ ಅಲ್ಲಿ ಕಟ್ಟಿದ್ದ ಧವಸ ಧಾನ್ಯಗಳನ್ನು ಜಮಾಯಿಸಿದ್ದ ಸಾವಿರಾರು ಭಕ್ತರು ಮುಗಿಬಿದ್ದು ಲೂಟಿ ಮಾಡಲು ಆರಂಭಿಸಿದರು. ಹೀಗೆ ದೋಚಿಕೊಂಡು ಹೋದ ಧಾನ್ಯಗಳನ್ನು ಮನೆಗೆ ತಂದು ಬೇಯಿಸಿಕೊಂಡು ತಿಂದರೆ ಆ ಮನೆಯಲ್ಲಿ ಎಂದಿಗೂ ಅನ್ನದ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಇದೆ.
ಪಂಚಕದಲ್ಲೇ ರಥೋತ್ಸವ!: ರಥೋತ್ಸವವು ಶ್ರೀಮಠದಿಂದ ಆರಂಭವಾಗಿ ಬೆಳಗಿನ ಐದು ಗಂಟೆಗೆ ಚನ್ನಗಿರೀಶ್ವರ ದೇವಸ್ಥಾನ ತಲುಪುತ್ತದೆ. ಜಾತ್ರೆಗೆ ಸಾಗರದೋಪಾದಿಯಲ್ಲಿ ಜನತೆ ಹರಿದು ಬರುವುದಲ್ಲದೇ ಅಹೋ ರಾತ್ರಿ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಸಾಮಾನ್ಯವಾಗಿ ಪಂಚಕದಲ್ಲಿ ಯಾವ ದೇವತಾ ಕಾರ್ಯಗಳನ್ನು ಮಾಡದಿರುವ ಸಂಪ್ರದಾಯವಿದ್ದರೂ ಎರಡೂ ರಥಗಳು ಪಂಚಕದಲ್ಲೇ ಸಾಗುವುದು ಇಲ್ಲಿಯ ವಿಶೇಷತೆ. ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿಯ ಜನತೆ ರಾತ್ರಿ 12 ಗಂಟೆಯಿಂದಲೇ ದೀಡ ನಮಸ್ಕಾರ ಹಾಕಲು ಆರಂಭಿಸಿದವರು ಸಂಜೆ 6ರವರೆಗೂ ನಿರಂತರವಾಗಿ ಹಾಕುತ್ತಿರುವ ದೃಶ್ಯ ಕಂಡು ಬಂದಿತು. ಭಾವೈಕ್ಯಕೆ್ಕೆ ಹೆಸರಾದ ಈ ಜಾತ್ರೆಯಲ್ಲಿ ಮುಸ್ಲಿಂ ಜನಾಂಗದವರೂ ದೀಡ ನಮಸ್ಕಾರ ಹಾಕಿದ್ದು ವಿಶೇಷ.
ಜಟಾಭಿಷೇಕದಿಂದ ಜಾತ್ರೆಗೆ ಚಾಲನೆ: ಜಾತ್ರೆಯು ಬುಧವಾರ ಸಾರ್ವಜನಿಕ ಜಟೋತ್ಸವದೊಂದಿಗೆ ಚಾಲನೆಗೊಂಡಿತು. ಜಟೋತ್ಸವದ ಅಭಿಷೇಕದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಶ್ರೀಮಠದ ಪರಂಪರೆಯಂತೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು ಅಭಿಷೇಕದ ನೇತೃತ್ವ ವಹಿಸಿದ್ದರು. ಮಂಗಳವಾದ್ಯ, ಕರಡಿ ಮಜಲು, ಶಹನಾಯಿಗಳೊಂದಿಗೆ ಪಲ್ಲಕ್ಕಿ ಉತ್ಸವವು ಶ್ರೀಮಠದಿಂದ ನಡುಚೌಕಿ ಮಾರ್ಗವಾಗಿ ಚನ್ನಗಿರೀಶ್ವರ ದೇವಸ್ಥಾನ ತಲುಪಿತು. ಉಚ್ಛಾಯಿ, ನಂದಿಕೋಲು, ಹಾಗೂ ಸಾವಿರಾರು ಭಕ್ತಾದಿಗಳು ಉತ್ಸವದೊಂದಿಗೆ ಹೆಜ್ಜೆ ಹಾಕಿದರು. ನಂತರ ನಡೆದ ಜಟೋತ್ಸವದಲ್ಲಿ ಮಹಿಳೆಯರು, ಮಕ್ಕಳು ಅಲಂಕೃತರಾಗಿ ಭಾಗವಹಿಸಿದ್ದರು.
ರಬಕವಿ, ಬನಹಟ್ಟಿ, ತೇರದಾಳ, ಜಮಖಂಡಿ, ಮುಧೋಳ, ಸಮೀರವಾಡಿ, ಸಂಗಾನಟ್ಟಿ, ಢವಳೇಶ್ವರ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಜಾತ್ರೆಗೆ ಕಳೆ ತಂದರು. ಜಟೋತ್ಸವ ನಡೆದ ಚನ್ನಗಿರೀಶ್ವರ ದೇವಾಲಯ ಜನ ಜಂಗುಳಿಯಿಂದ ತುಂಬಿತ್ತು. ಮಹಾಲಿಂಗೇಶ್ವರ ಮಠದಲ್ಲಿ ಪ್ರಸಾದದ ವ್ಯವಸ್ಥೆ ಇತ್ತು.
ನಿಜವಾದ ನಂಬಿಕೆ: ಪ್ರತಿ ವರ್ಷ ಜಾತ್ರೆಯಂದು ಒಂದೆರಡು ನಿಮಿಷವಾದರೂ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಜಟೋತ್ಸವದ ಆರಂಭಕ್ಕೆ ಮಳೆ ಸುರಿದು ಜನರ ನಂಬಿಕೆ ಇನ್ನಷ್ಟು ಬಲವಾಯಿತು.
ಸೂಕ್ತ ಬಂದೋಬಸ್ತ್: ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಧೋಳ ಸಿಪಿಐ ಎಚ್.ಡಿ. ಮುದರೆಡ್ಡಿ, ಠಾಣಾಧಿಕಾರಿ ಎಚ್.ಆರ್. ಪಾಟೀಲ ಸೂಕ್ತ ಬಂದೋಬಸ್ತ್ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.