ಯಳಂದೂರು: ಪಟ್ಟಣದಲ್ಲಿರುವ ಐತಿಹಾಸಿಕ ಗೌರೇಶ್ವರ ದೇಗುಲದ ಹಿಂಭಾಗದಲ್ಲಿರುವ ಪಂಚಲಿಂಗಗಳ ವಿಶೇಷ ದರ್ಶನಕ್ಕೆ ಸೋಮವಾರ ಭಕ್ತಸಾಗರ ಹರಿದು ಬಂದಿತು.
ಇದರ ನಿಮಿತ್ತ ಭಾನುವಾರದಿಂದಲೇ ಗಣಪತಿ, ಚಂಡಿಕಾ ಹಾಗೂ ನವಗ್ರಹ ಹೋಮ ಹಾಗೂ ಗೌರೇಶ್ವರ ದೇವರಿಗೆ ರುದ್ರಭಿಷೇಕ ಮಾಡಲಾಯಿತು. ಮಲ್ಲಿಕಾರ್ಜುನೇಶ್ವರ, ಜಂಬುನಾಥೇಶ್ವರ, ಅರುಣಾಚಲೇಶ್ವರ, ತಾರಕೇಶ್ವರ ಹಾಗೂ ಚಿದಂಬರೇಶ್ವ ದೇವರುಗಳಿಗೆ ನಾಗಾಭರಣಗಳನ್ನು ಧರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದರ ಮುಂಭಾಗದಲ್ಲಿರುವ ಗೌರೇಶ್ವರ ಹಾಗೂ ಪಾರ್ವತಾಂಬೆ ದೇವರುಗಳಿಗೂ ಬೆಳ್ಳಿಯ ಆಭರಣಗಳನ್ನು ಧರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಿಗ್ಗೆಯಿಂದಲೇ ಬರುವ ಭಕ್ತರಿಗೆ ದಾನಿಗಳ ನೆರವಿನಿಂದ ಪ್ರಸಾದ ವಿನಿಯೋಗ ಮಾಡಲಾಯಿತು. ಇದರ ನಿಮಿತ್ತ ಬಳೇಮಂಟಪವೂ ಸೇರಿದಂತೆ ದೇಗುಲಕ್ಕೆ ವಿಶೇಷ ವಿದ್ಯುತ್ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಸಂಜೆ ಮಹೇಂದರ್ ಹಾಗೂ ರವಿಕುಮಾರ್ ತಂಡದವರು ಭಕ್ತಿ ಗೀತೆಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸುಮಾರು 500 ವರ್ಷಗಳ ಇತಿಹಾಸ ಇರುವ ಈ ದೇಗುಲಕ್ಕೆ ಪ್ರತಿಬಾರಿ ತಲಕಾಡಿನಲ್ಲಿ ಪಂಚಲಿಂಗ ದರ್ಶನ ನಡೆದಾಗ ಇಲ್ಲಿಯೂ ದರ್ಶನ ನಡೆಯುತ್ತದೆ. ಆದರೆ ಇಲ್ಲಿಗೆ ಮಾತ್ರ ಸರ್ಕಾರದಿಂದ ಯಾವುದೇ ನೆರವು ನೀಡುವುದಿಲ್ಲ. ಹೀಗಾಗಿ ಈ ಬಾರಿಯೂ ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ.
‘ಮುಂದಿನ ದಿನದಲ್ಲಾದರೂ ಈ ಬಗ್ಗೆ ಸಂಬಂಧಪಟ್ಟವರು ಕ್ರಮ ವಹಿಸಿ ದೇಗುಲ ಅಭಿವೃದ್ಧಿಗೆ ಶ್ರಮಿಸಲಿ ಎಂದು ಎನ್. ದೊರೆಸ್ವಾಮಿ, ಮಹದೇವಸ್ವಾಮಿ, ಚಂದ್ರಮೌಳಿ, ಅನಿಲ್,ರಾಜು, ದೇವರಾಜು’ ಆಗ್ರಹಿಸಿದರು.