ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚವಾದ್ಯಕ್ಕೆ ಜಾತಿ ಮೋಡ

Last Updated 3 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಪಂಚವಾದ್ಯವನ್ನು, ವಾಲಗವೆಂದೂ, ಮಂಗಲವಾದ್ಯವೆಂದೂ ಕರೆಯುತ್ತಾರೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿರುವ ಒಂದು ಜನಪದ ವಾದ್ಯ ಪ್ರಕಾರ. ಮೋವರಿ(ಮೌರಿ) ಶೃತೆ, ದೋಳು, ತಾಸ್ಮೋರು, ತಾಳ ಇವುಗಳು ಪಂಚವಾದ್ಯದ ಘಟಕಗಳಾಗಿವೆ. ಮದುವೆ ಮತ್ತಿತರ ಶುಭ ಕಾರ್ಯದಲ್ಲಿ ಅನಿವಾರ್ಯವೆಂಬಷ್ಟರ ಮಟ್ಟಿಗೆ ಇದು ಬಳಕೆಯಲ್ಲಿದೆ.

ಇದರ ಇತಿಹಾಸ ತೀರಾ ಹಿಂದಿನದೆ. ದೇವಸ್ಥಾನದ ಪರಿಚಾರಿಕ ಕೆಲಸ ಮಾಡುತ್ತಿರುವವರೇ ಈ ಪಂಚವಾದ್ಯದ ಜನಕರೂ ಇರಬಹುದು. ಹಿಂದೆ ಹಲವು ಸಂದರ್ಭದಲ್ಲಿ ದೇವಸ್ಥಾನದಲ್ಲಿ ದೇವದಾಸಿಯಾಗಿರುವ ಕುಟುಂಬಗಳು ಈ ಪಂಚವಾದ್ಯದಲ್ಲಿ ನಿರತರಾಗಿದ್ದರು.

ದೋಳು  ಮತ್ತು  ತಾಸ್ಮೋರು  ಚರ್ಮ ವಾದ್ಯ. ಮರದ ಕಲಶಕ್ಕೆ ಚರ್ಮದ ಹೊದಿಕೆ ಹಾಕಿ ಹಗ್ಗದಿಂದ ಬಿಗಿದಿರುತ್ತಾರೆ. ಆಕಳು, ಕುರಿಯ ಚರ್ಮವನ್ನು ಇದಕ್ಕೆ ಉಪಯೋಗಿಸುತ್ತಾರೆ.  ಮೋವರಿ  ಮತ್ತು  ಶೃತೆಯು ಮರದಿಂದ ಕಡೆಯಲ್ಪಟ್ಟ ನಳಿಕೆ, ಮೇಲೆ ತಾಳೆಗರಿಯಿಂದ ಮಾಡಿದ  ಜೀವಾಳ  ಉಪಯೋಗಿಸುತ್ತಾರೆ.

ಉತ್ತರಕನ್ನಡದಲ್ಲಿ ಮುಖ್ಯವಾಗಿ ಭಂಡಾರಿ(ಕನ್ನಡ ಮಾತೃಭಾಷೆ), ದೇಶಭಂಡಾರಿ (ಕೊಂಕಣಿ ಮಾತೃಭಾಷೆ) ಆಗೇರರು (ದಲಿತರು) ಈ ವಾಲಗವನ್ನು ನುಡಿಸುತ್ತಾರೆ. ಭಂಡಾರಿ ಸಮುದಾಯದಲ್ಲಿ ಸುಮಾರು 40-50 ತಂಡಗಳಿವೆ;  ದೇಶಭಂಡಾರಿ ಸಮುದಾಯದಲ್ಲಿ ಸುಮಾರು 10-15 ತಂಡಗಳಿವೆ; ಆಗೇರ ಸಮುದಾಯದಲ್ಲಿ 8-10 ತಂಡಗಳು ಪಂಚವಾದ್ಯದಲ್ಲಿ ನಿರತರಾಗಿವೆ. ವಾಲಗವನ್ನೇ ತಮ್ಮ ಉಪವೃತ್ತಿಯಾಗಿಸಿಕೊಂಡ  ಭಂಡಾರಿ  ಸಮುದಾಯದಲ್ಲಿ ಇರುವವರೇ 5-7 ಸಾವಿರ ಜನರು. ಕಲಾವಿದರಿಲ್ಲದ ಕುಟುಂಬವೇ ಇಲ್ಲವೇನೋ ಅನ್ನುವಷ್ಟು ವ್ಯಾಪಕವಾಗಿ ಪಂಚವಾದ್ಯ ಕಲೆ ಇವರಿಗೆ ಮೈಗೂಡಿದೆ.

ವಾದ್ಯ ನುಡಿಸುವುದು ಮಾತ್ರವಲ್ಲ, ವಾದ್ಯದ ಪರಿಕರ ತಯಾರಿಸುವುದು, ಮಣ್ಣಿನ ಮೂರ್ತಿ ತಯಾರಿಸುವುದು, ಯಕ್ಷಗಾನದ ಮುಮ್ಮೇಳ-ಹಿಮ್ಮೇಳದಲ್ಲಿ ಕಲಾವಿದರಾಗಿ ಸೇವೆ....... ಇತ್ಯಾದಿ ಕಲೆಗಳಲ್ಲಿ ಕೂಡ ಇವರು ಪರಿಣತರು.  ವಾದ್ಯದ ಮೇಳವೊಂದಕ್ಕೆ ಒಂದು ಸಾವಿರದಿಂದ ನಾಲ್ಕು ಸಾವಿರದವರೆಗೂ ಸಂಭಾವನೆ ಇದೆ. ಆದರೆ ಇಡೀ ವರ್ಷಕ್ಕೆ ಹೆಚ್ಚೆಂದರೆ 40-50 ದಿನ ಕೆಲಸ ಸಿಗಬಹುದು.

ಬಹಳ ಮಹತ್ವದ ಕಲಾವಿದರು ಈ ಸಮುದಾಯದಲ್ಲಿ ಆಗಿ ಹೋಗಿದ್ದಾರೆ. ಪಾಂಡುರಂಗ ಭಂಡಾರಿ, ಮಂಜ ಭಂಡಾರಿ, ಸಾಂಬ ಭಂಡಾರಿ, ಕನ್ನಯ್ಯ ಭಂಡಾರಿ, ಸೀತಾರಾಂ ಭಂಡಾರಿ, ಸುಬ್ರಾಯ ಭಂಡಾರಿ, ರಾಮಕಷ್ಣ ಭಂಡಾರಿ, ಕೃಷ್ಣ ಭಂಡಾರಿ, ಭೈರವ ಭಂಡಾರಿ, ದತ್ತ ಭಂಡಾರಿ ಮುಂತಾದವರು ಪಂಚವಾದ್ಯದ ಕಸುಬುದಾರರೆಂದೇ ಹೆಸರು ಪಡೆದಿದ್ದಾರೆ. ದುರಂತವೆಂದರೆ ಈ ವಾದ್ಯಕ್ಕೊಂದು  ಜಾತಿಯ ಮುಸುಕಿರುವುದರಿಂದ ಸ್ವತಃ ಕಲಾವಿದರೂ ತಮ್ಮದೊಂದು  ಕಲೆ  ಎಂದುಕೊಳ್ಳುವ ಬದಲು ಇದೊಂದು ಸಂಪ್ರದಾಯ ಮತ್ತು ಆರಾಧನೆಯ ಭಾಗ ಅಂದುಕೊಂಡಿದ್ದಾರೆ.

ಭಂಡಾರಿ ಜಾತಿಯಲ್ಲಿಯೇ ಮದುವೆಗಳು ನಡೆದರೆ ಮದುವೆಗೆ ಬಂದ ಸಂಬಂಧಿಕರಲ್ಲಿರುವ ಅತ್ಯುತ್ತಮ ಕಲಾವಿದರೆಲ್ಲಾ ಸೇರಿ ವಾದ್ಯ ನುಡಿಸುವುದನ್ನು ಕೇಳುವುದೇ ಒಂದು ಸೊಬಗು. ಒಬ್ಬರನ್ನು ಒಬ್ಬರು ಮೀರಿಸುವ ರೀತಿಯಲ್ಲಿ ಇದು ನಡೆಯುತ್ತದೆ; ಜನ ಅವರನ್ನು ಸುತ್ತುವರಿದು ಆನಂದಿಸುತ್ತಾರೆ. ಅವರು ಮಾಡಿದ ಸರಿ ತಪ್ಪುಗಳ ಬಗ್ಗೆ ದೀರ್ಘ ಚರ್ಚೆ ದಿನವಿಡೀ ನಡೆಯುತ್ತದೆ. ಒಂದು ರೀತಿಯಲ್ಲಿ ಈ ಚರ್ಚೆಯೇ ಹೊಸಬರಿಗೆ ಪಾಠ ಕೂಡ.

ಆದರೆ ಪಂಚವಾದ್ಯವನ್ನು ಈ ನೆಲದ ಮಹತ್ವದ ಜಾನಪದ ಕಲೆಯೆಂದು ಅಕಾಡೆಮಿಗಳಾಗಲೀ, ಸಂಸ್ಕೃತಿ ಇಲಾಖೆಯಾಗಲೀ, ಪರಿಗಣಿಸಲೇ ಇಲ್ಲ. ರಾಜ್ಯದ ಯಾವುದೇ ಉತ್ಸವದಲ್ಲಿಯೂ (ಜಿಲ್ಲೆಯ ಹೊರಗೆ) ಈ ಕಲೆ ಪ್ರದರ್ಶನಗೊಂಡಿಲ್ಲ. ಯಾವೊಬ್ಬ ಕಲಾವಿದರಿಗೂ ಅಕಾಡೆಮಿಯಿಂದ, ಸಂಸ್ಕೃತಿ ಇಲಾಖೆಯಿಂದ ಪ್ರಶಸ್ತಿಯನ್ನಾಗಲೀ, ಮಾಸಾಶನವನ್ನಾಗಲೀ ನೀಡಿಲ್ಲ. 
ಪಂಚವಾದ್ಯ ತನ್ನ ಜಾನಪದ ಮಟ್ಟಿನಿಂದ ಹೊರಬರುತ್ತಿದೆ.  ಮೋವರಿ  ಎನ್ನುವುದು  ಶಹನಾಯಿಯ ರೂಪ ಪಡೆದುಕೊಂಡು  ಹಿಂದೂಸ್ತಾನಿ ಸಂಗೀತ ಶೈಲಿಯನ್ನು ಅನುಸರಿಸುತ್ತಿದೆ.

ಈಗಿರುವ ಸ್ಥಿತಿಯಲ್ಲಿ ಪಂಚವಾದ್ಯ ಕಲೆಯನ್ನೇ ನಂಬಿ ಬದುಕು ಕಟ್ಟಿಕೊಳ್ಳುವುದು ಸಾಧ್ಯವಿಲ್ಲ. ಕುಟುಂಬ ನಿರ್ವಹಣೆಗೆ ಬೇಕಾದ ಆರ್ಥಿಕ ಶಕ್ತಿಯನ್ನು ಕೂಡ ಇದು ನೀಡಲಾರದು. ಇನ್ನು ವಾದ್ಯ ಕಟ್ಟಲು, ಸೂಕ್ತ ಚರ್ಮವೂ ಸಿಗುತ್ತಿಲ್ಲ. ಮರಗಳೂ ಸಿಗುತ್ತಿಲ್ಲ. ವಾದ್ಯಗಳೆಲ್ಲಾ  ರೆಡಿಮೇಡ್  ಆಗಿರುವುದರಿಂದ ಆ ಕೆಲಸವೂ ಇಂದು ಆರ್ಥಿಕವಾಗಿ ಲಾಭದ್ದಲ್ಲ. ಹಾಗಾಗಿ ಹೊಸ ತಲೆಮಾರಿಗೆ ಇದರಲ್ಲಿ ಆಕರ್ಷಣೆ ಉಳಿದಿಲ್ಲ. ಸಾಮಾಜಿಕ ಮನ್ನಣೆಯ ಪ್ರಶ್ನೆ ಕೂಡ ಇಲ್ಲಿದೆ. ಯಾಕೆಂದರೆ ಪಂಚವಾದ್ಯ  ಭಂಡಾರಿ ಕುಲ ಕಸುಬು ಎನ್ನುವ ಹಣೆಪಟ್ಟಿಯಲ್ಲಿ ಬೆಳೆಯುತ್ತಿದೆ.  ಭಂಡಾರಿ ಶೂದ್ರವರ್ಣದ ಒಂದು ಜಾತಿ. ಬಹುತೇಕ ದೇವಸ್ಥಾನದ ಚಾಕರಿ ಮಾಡುತ್ತಾ ಬೆಳೆದವರು. ತೀರಾ ಹಿಂದಕ್ಕೆ ಹೋದರೆ  ದೇವದಾಸಿ  ಕುಟುಂಬದಿಂದ ಬಂದವರು ಹಲವರಿದ್ದಾರೆ. ಬ್ರಾಹ್ಮಣರು ಇವರನ್ನು ಕೀಳು ಜಾತಿಯವರೆಂದು ಸಹ ಪಂಕ್ತಿಗೆ, ವೈವಾಹಿಕ ಸಂಬಂಧಕ್ಕೆ ಅನರ್ಹರೆಂದು ಪರಿಗಣಿಸಿದ್ದಾರೆ. ಪೂಜಾರಿಗಳು ಗರ್ಭಗುಡಿಯ ಒಳಗಡೆ ಇದ್ದರೆ ಇವರು ಗರ್ಭಗುಡಿಯ ಆಚೆಗೆ ನಿಂತು ದೇವಸ್ಥಾನ ಸ್ವಚ್ಛ ಮಾಡುವುದು, ಪೂಜೆಯಾಗುವಾಗ  ವಾದ್ಯ ನುಡಿಸುವುದು, ಪೂಜಾ ಸಾಮಗ್ರಿಯನ್ನು ತೊಳೆದು ಶುಚಿಗೊಳಿಸುವುದು ದೇವಕಾರ್ಯವಾದರೆ ಬ್ರಾಹ್ಮಣರ ಊಟದ ನಂತರ ಎಲ್ಲಾ ಪಾತ್ರೆ ತೊಳೆದು, ಪಾತ್ರೆಯ ತಳದಲ್ಲಿರುವುದನ್ನು (ಇದ್ದರೆ) ಊಟ ಮಾಡುವುದು ಸಾಂಪ್ರದಾಯಿಕವಾದ ಕ್ರಮ.

ಬ್ರಾಹ್ಮಣರ ಮನೆಗೆ ಮದುವೆಗೆ ಹೋದರೂ (ಈಗ ಕಲ್ಯಾಣ ಮಂಟಪದ ಮದುವೆಯಾದ್ದರಿಂದ ರೀತಿ ರಿವಾಜು ಸ್ವಲ್ಪ ಭಿನ್ನ) ಮದುವೆ ಅಂಗಳದ ಮೂಲೆ ಇವರ ಸ್ಥಳ. ಎಲ್ಲರ ಊಟ ಆದ ಮೇಲೆ ಅಲ್ಲೇ  ಇವರಿಗೆ ಊಟ. ತಾವೇ ಎಲೆ ಎತ್ತಿ ಸಗಣಿ ಹಾಕಿ ಸ್ವಚ್ಛ ಮಾಡಿ ಬರಬೇಕು. ತನ್ನದೇ ತರಗತಿಯಲ್ಲಿ ಓದಿದ ಒಬ್ಬ ದಡ್ಡ ಸಹಪಾಠಿಯ ಮನೆಗೆ ಹೋದರೂ ಹೀಗೆ; ಹೊರಗೆ ಕುಳಿತೇ ಊಟ ಮಾಡಬೇಕು. ಭಂಡಾರಿಗಳ ಕತೆ ಹೀಗಾದರೆ ಇನ್ನು ದಲಿತ ವರ್ಗಕ್ಕೆ ಸೇರಿದ ಆಗೇರರ ಸ್ಥಿತಿ ಇನ್ನೂ ಶೋಚನೀಯ.

ಆಶ್ಚರ್ಯವೆಂದರೆ  ಭಂಡಾರಿಗಳು  ತಾವು ಉಳಿದೆಲ್ಲಾ ಬ್ರಾಹ್ಮಣೇತರ ಜಾತಿಗಳಿಗಿಂತ ಶ್ರೇಷ್ಠ  ಜಾತಿ  ಎಂದು ಕೊಳ್ಳುತ್ತಾರೆ. ಹಿಂದೆಲ್ಲಾ ಬ್ರಾಹ್ಮಣೇತರ ಜಾತಿಗಳ ಮದುವೆಗೆ ಹೋದರೆ ಅವರ ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ. ಅಕ್ಕಿ, ಕಾಯಿ, ಬೇಳೆ ಪಡೆದು ತೋಟದಲ್ಲಿ 3 ಕಲ್ಲು ಹೂಡಿ ಅಡಿಗೆ ಮಾಡಿಕೊಳ್ಳುತ್ತಿದ್ದರು.

ಹೀಗೆ  ಪಂಚವಾದ್ಯ  ಒಂದು ಜಾತಿ ಕಸುಬಾಗಿ ಬಿಟ್ಟಿರುವುದರಿಂದ ಬೇರೆ ಜಾತಿ ಸಮುದಾಯದವರು ಇದರೊಳಕ್ಕೆ ಪ್ರವೇಶ ಮಾಡಿಲ್ಲ. ಮಹತ್ವದ ಒಂದು ಕಲೆ  ಜಾತಿಯ ಚೌಕಟ್ಟಿನ ಕಾರಣಕ್ಕೆ ಸೊರಗುವ ಸ್ಥಿತಿ ಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT