ಚಾಮರಾಜನಗರ: ಬೌದ್ಧ ಧರ್ಮವನ್ನು ಪ್ರಚುರಪಡಿಸುವ ಪಂಚಶೀಲ ಪಾದಯಾತ್ರೆಯನ್ನು ತಾಲ್ಲೂಕಿನ ಮರಿಯಾಲದಹುಂಡಿಯಲ್ಲಿ ಗ್ರಾಮಸ್ಥರು ಸ್ವಾಗತಿಸಿದರು.
ಗ್ರಾಮದ ಅಂಬೇಡ್ಕರ್ ಸಮುದಾಯ ಭವನಕ್ಕೆ ಆಗಮಿಸಿ ಬುದ್ಧನ ಪಂಚಶೀಲ ಪಾದಯಾತ್ರೆಗೆ ಪೂಜೆ ಸಲ್ಲಿಸಿದರು. ನಂತರ, ಮೊಂಬತ್ತಿ ಹಿಡಿದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಬಂತೇಜಿ ಸಂಘಪಾಲ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಹಣದ ಆಸೆಗೆ ಮಾನಸಿಕ ನೆಮ್ಮದಿ ದೂರವಾಗಿದೆ. ನೆಮ್ಮದಿಗಾಗಿ ಬುದ್ದನ ಸಂದೇಶಗಳನ್ನು ತಿಳಿದುಕೊಳ್ಳಬೇಕು. ಬುದ್ದ ಧರ್ಮವನ್ನು ಸ್ವೀಕರಿಸಿ ಶಾಂತಿ, ಸಹಬಾಳ್ವೆ ಹಾಗೂ ಅಹಿಂಸೆ ಮಾರ್ಗದಲ್ಲಿ ಸುಖದ ಜೀವನ ನಡೆಸಲು ಮುಂದಾಗಬೇಕು’ ಎಂದರು.
ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಅಭಿವೃದ್ಧಿ ಪಡಿಸಲು ಮುಂದಾಗಬೇಕು. ದ್ವೇಷ, ಅಸೂಯೆ ಬಿಟ್ಟು ಶಾಂತಿಯ ಪಾಲನೆ ಮಾಡಬೇಕು. ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು. ಸುಶಿಕ್ಷತರಾಗಿ ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಮುಂದಾಗಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಎಂ.ಎಸ್. ಮಾದಯ್ಯ, ಮುಖಂಡರಾದ ದೇವಯ್ಯ, ಗುರುಪ್ರಸಾದ್, ಎಂ.ಬಿ. ಪ್ರಕಾಶ್, ಮಂಜು, ಮಹೇಶ್, ನಾಗರಾಜು, ಕುಮಾರ್, ಸಿ.ಎಂ. ಕೃಷ್ಣಮೂರ್ತಿ, ಸಂಬುದ್ದ ಟ್ರಸ್ಟ್ನ ಮಹೇಶ್ ಪಾಲ್ಗೊಂಡಿದ್ದರು.