ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯು ತಿಂಗಳ ಸರಣಿ ಕಾರ್ಯಕ್ರಮ `ಇಂಚರ 21' ಸಂಗೀತ ಕಾರ್ಯಕ್ರಮವನ್ನು ದೊಡ್ಡಬೊಮ್ಮಸಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿತ್ತು.
ಪೂರ್ಣಿಮಾ ಪ್ರಸಾದ್ ಅವರು `ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ', `ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು' (ಕೆ.ಎಸ್.ನರಸಿಂಹಸ್ವಾಮಿ), `ಯಾರಿವರು ಯಾರಿವರು' (ಜಿ.ಎಸ್.ಎಸ್.), `ಮಾಮರದ ತಂಪಿಗೆ ಕೂತಿರುವ ಗಿಳಿಗಳೆ' (ಜನಪದ) ಗೀತೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೋವಿಂದ ಆರ್. ಜೋಶಿ ಅವರು `ಬಾರೆ ಭಾಗ್ಯದ ನಿಧಿಯೆ ಕರವೀರಪುರ ನಿವಾಸಿನಿ ದೊರೆಯೆ' (ಭಕ್ತಿಗೀತೆ), `ನನ್ನ ಕೈಯ ಹಿಡಿದಾಕೆ ಅಳುನುಂಗಿ ನಗು ಒಮ್ಮೆ' (ದ.ರಾ.ಬೇಂದ್ರೆ) ಸೇರಿದಂತೆ ಅನೇಕ ಗೀತೆಗಳನ್ನು ಹಾಡಿ ರಂಜಿಸಿದರು.
ಸಂಸ್ಥೆಯ ಸಂಸ್ಥಾಪಕಿ ಗಾಯತ್ರಿ ಕೇಶವ ಮೂರ್ತಿ ಅವರು ಡಿ.ವಿ.ಜಿ ಅವರ ಮೈಸೂರು ಅನಂತಸ್ವಾಮಿ ಸಂಯೋಜಿಸಿರುವ `ಏನೀ ಮಹಾನಂದವೇ ಓ ಭಾಮಿನಿ' ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಎಸ್.ಅಭಿಜಿತ್ (ಹಾರ್ಮೋನಿಯಂ), ಎಂ.ಗುರುನಂದನ್ ರಾವ್ (ತಬಲಾ) ವಾದ್ಯ ಸಹಕಾರ ನೀಡಿದರು.
ಗಾಯಕ ಅನಂತ ಬೆಳವಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ವಿ.ಮಲ್ಲಿಕಾರ್ಜುನಯ್ಯ, ಸಂಸ್ಥೆ ಸಹ ಕಾರ್ಯದರ್ಶಿ ಜಿ.ಮಹೇಶ್ ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.