ಬೆಂಗಳೂರು: ಪ್ರಸ್ತುತ ಜಾರಿಯಲ್ಲಿರುವ 1993ರ ಕರ್ನಾಟಕ ಪಂಚಾಯತ್ರಾಜ್ ಕಾಯ್ದೆಗೆ ಸಮಗ್ರವಾಗಿ ತಿದ್ದುಪಡಿ ತರುವ ಸಂಬಂಧ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ಕುಮಾರ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ.
ಪಂಚಾಯತ್ರಾಜ್ ಕಾಯ್ದೆಯನ್ನು ಇನ್ನಷ್ಟು ಬಲಪಡಿಸುವ ಮತ್ತು ಪಂಚಾಯತ್ರಾಜ್ ಸಂಸ್ಥೆಗಳನ್ನು ಕ್ರಿಯಾಶೀಲಗೊಳಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರು ತಿಂಗಳು: ಈಗಿರುವ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಮುಂದುವರಿಸಬೇಕೇ ಅಥವಾ ಎರಡು ಹಂತದ ವ್ಯವಸ್ಥೆ ಜಾರಿಗೆ ತರುವ ಅಗತವಿದೆಯೇ ಎಂಬ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ರಮೇಶ್ ಕುಮಾರ್ ಹೇಳಿದರು.
ಸಮಿತಿಯಲ್ಲಿರುವ ಸದಸ್ಯರು
ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಸಂಸದರಾದ ಸಿ.ನಾರಾಯಣಸ್ವಾಮಿ, ಅಮರ್ಸಿಂಗ್ ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜನಾರ್ದನ, ಬಳ್ಳಾರಿ ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟರಾವ್ ಘೋರ್ಪಡೆ, ನಿವೃತ್ತ ಐಎಎಸ್ ಅಧಿಕಾರಿ ಟಿ.ಆರ್.ರಘುನಂದನ್, ಮಾಜಿ ಶಾಸಕ ಖಾಜಿ ಅರ್ಷದ್ ಅಲಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಷ್ಠಾನದ ಉಪಾಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ನಿರ್ದೇಶಕ ಜಾರ್ಜ್ ಮ್ಯಾಥ್ಯೂ, ಧಾರವಾಡ ಜಿ.ಪಂ. ಮಾಜಿ ಅಧ್ಯಕ್ಷೆ ಶಾಂತವ್ವ ಗುಜ್ಜಲ, ಕಾನೂನು ತಜ್ಞರಾದ ಸಂದೀಪ್ ಬೆಳಗಲಿ, ಎಚ್.ಡಿ.ಅಮರನಾಥ್, ದಕ್ಷಿಣಾ ಮೂರ್ತಿ (ಸದಸ್ಯ ಕಾರ್ಯದರ್ಶಿ).