ಗುತ್ತಲ: ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ವೇಳೆ ಭಾನುವಾರ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ.
ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಶಾಹಜಹಾನ್ಸಾಬ್ ಅಗಡಿ ಅವರು ಜಾತಿ ನಿಂದಿಸಿದ್ದಾರೆ ಎಂದು ಆರೋಪಿಸಿ ಇನ್ನೊಂದು ಗುಂಪು ಆಕ್ರೋಶಗೊಂಡ ಹಿನ್ನೆಲೆಯಲ್ಲಿ ಗುಂಪು ಘರ್ಷಣೆ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಕಾಂಗ್ರೆಸ್ ಬೆಂಬಲಿತ ಜಯವ್ವ ಮುತ್ತಪ್ಪ ಆರಿಕಟ್ಟಿ ಅಧ್ಯಕ್ಷರಾಗಿ ಮತ್ತು ಕಾಂಗ್ರೆಸ ಬೆಂಬಲಿತ ಬಸವರಾಜ ರುದ್ರಾಕ್ಷಿ ಉಪಾಧ್ಯಕರಾಗಿ ಆಯ್ಕೆಯಾದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಪಂಚಾಯಿತಿಯ ಹೊರಗಡೆ ಶಾಹಜಹಾನ್ಸಾಬ್ ಅಗಡಿ ಜಾತಿ ನಿಂದನೆ ಮಾಡಿದರು. ಆಗ ಆಕ್ರೋಶಗೊಂಡ ಇನ್ನೊಂದು ಗುಂಪು ಬಸ್ ನಿಲ್ದಾಣದ ಬಳಿಯ ಸರ್ಕಲ್ ಬಳಿ ಪ್ರತಿಭಟನೆ ಮಾಡಲು ಮುಂದಾಯಿತು. ಈ ಮಧ್ಯೆ ಶಾಹಜಹಾನ್ಸಾಬ್ ಅವರ ಅಂಗಡಿಯ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು.
ಆಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಹಾವೇರಿಯಿಂದ ಮೀಸಲು ಪಡೆಯನ್ನು ಕರೆಯಿಸಲಾಗಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸ್ ಅಧಿಕಾರಿಗಳು ಎರಡೂ ಗುಂಪಿನ ಮುಖಂಡರೊಂದಿಗೆ ಸಮಾಲೋಜನೆ ನಡೆಸಿ ಪರಿಸ್ಥಿತಿ ತಿಳಿಸಿಗೊಳಿಸಿದರು.