ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿರತೆಯೊಂದು ಪಂಜರದಿಂದ ಹೊರಬಂದು ಮರವೇರಿದ ಪರಿಣಾಮ ಉದ್ಯಾನದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಘಟನೆ ಶನಿವಾರ ಸಂಜೆ ನಡೆಯಿತು.
ಉದ್ಯಾನದ ಆಸ್ಪತ್ರೆ ಮುಂಭಾಗದ ಪಂಜರದಲ್ಲಿದ್ದ ಚಿರತೆಯು ಬೋನಿನ ಮೇಲಿದ್ದ ಕೋತಿಗಳನ್ನು ಹಿಡಿಯುವ ಪ್ರಯತ್ನದಲ್ಲಿ ಪಂಜರವನ್ನು ಮುರಿದುಹಾಕಿತು. ನಂತರ ತಪ್ಪಿಸಿಕೊಂಡ ಅದು ಸಮೀಪವೇ ಇದ್ದ ಮರವೇರಿ ಎಲ್ಲರಲ್ಲೂ ಗಾಬರಿ ಉಂಟುಮಾಡಿತು.
ಈ ಘಟನೆಯನ್ನು ನೋಡುತ್ತಿದ್ದಂತೆಯೇ ಉದ್ಯಾನದಲ್ಲಿದ್ದ ಪ್ರವಾಸಿಗರು ಭಯಗೊಂಡು ಓಡಲು ಪ್ರಾರಂಭಿಸಿದರು. ಉದ್ಯಾನದ ಸಿಬ್ಬಂದಿಗೆ ದಿಕ್ಕು ತೋಚದಂತಾಯಿತು. ಮುಂದೇನು ಮಾಡುವುದು ಎಂಬ ಚಿಂತನೆ ಮಾಡುತ್ತಿದ್ದರು.
ತುಂಬ ವೇಗವಾಗಿ ಮರದಿಂದ ಮರಕ್ಕೆ ನೆಗೆಯುವ ಸಾಮರ್ಥ್ಯ ಇರುವ ಚಿರತೆಯಿಂದ ಏನಾಗುವುದೋ ಎಂಬ ಆತಂಕ ಕಾಡುತ್ತಿತ್ತು. ಆಶ್ಚರ್ಯ ಎಂಬಂತೆ ಕೆಲವೇ ನಿಮಿಷಗಳಲ್ಲಿ ಚಿರತೆ ಮರಳಿ ಪಂಜರ ಸೇರಿದ್ದರಿಂದ ಉದ್ಯಾನದ ಸಿಬ್ಬಂದಿ ನಿಟ್ಟುಸಿರುಬಿಟ್ಟರು.