ಚಿಕ್ಕೋಡಿ: ತಾಲ್ಲೂಕಿನ ಯಕ್ಸಂಬಿಯ ಬೀರದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಖ್ಯಾತಿಯ ಮಲ್ಲರ ಜಂಗೀ ಕುಸ್ತಿ ಪಂದ್ಯಾವಳಿಯ ಪ್ರಥಮ ಕ್ರಮಾಂಕದ ಕಾಳಗದಲ್ಲಿ ಪಂಜಾಬನ ಕ್ರಿಶನಕುಮಾರ ಅವರು ಹರಿಯಾನಾದ ಹಿತೇಶಕುಮಾರ ಅವರನ್ನು ಮಣಿಸಿ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು.
ಮಲಿಕವಾಡ ಹೊರವಲಯದ ಶರ್ಯತ್ತು ಮೈದಾನದಲ್ಲಿ ನಿರ್ಮಿಸಿದ್ದ ಅಖಾಡಾದ ಸುತ್ತ ಕಿಕ್ಕಿರಿದು ಸೇರಿದ್ದ ಸಾವಿರಾರು ಸಂಖ್ಯೆಯ ಕುಸ್ತಿ ರಸಿಕರ ಕರತಾಡನಗಳ ಮಧ್ಯೆ ಸುಮಾರು 23 ನಿಮಿಷಗಳ ಕಾಲ ನಡೆದ ತೀವೃ ಸೆಣಸಾಟದಲ್ಲಿ ಕ್ರಿಶನಕುಮಾರ ಅವರು ಘುಟನಾ ಪಟ್ಟು ಬಳಸಿ ಚಿತ್ ಮಾಡಿ ಪ್ರಥಮ ಸ್ಥಾನ ಗಿಟ್ಟಿಸಿದರು.
ಪಂಜಾಬಿನ ರುಬಲಜಿತಸಿಂಗ್ ಮತ್ತು ಹರಿಯಾನಾದ ಸತ್ಯೇಂದ್ರ ಅವರ ಮಧ್ಯೆ ನಡೆದ ದ್ವಿತೀಯ ಕ್ರಮಾಂಕಕ್ಕಾಗಿ ಸುಮಾರು 23 ನಿಮಿಷಗಳ ಕಾಲ ತೀವ್ರ ಸೆಣಸಾಟ ನಡೆಯಿತು. ಒಂದು ಹಂತದಲ್ಲಿ ಮಲ್ಲರು ಅಖಾಡಾದಿಂದ ಹೊರಗೆ ಬಿದ್ದು ರುಬಲಜಿತಸಿಂಗ್ ಅವರ ಎಡಗಾಲಿಗೆ ಪೆಟ್ಟಾದ ಪರಿಣಾಮವಾಗಿ ಪಂದ್ಯವನ್ನು ಮೊಟಕುಗೊಳಿಸಲಾಯಿತು. ತೃತೀಯ ಸ್ಥಾನಕ್ಕಾಗಿ ನಡೆದ ಕಾಳಗದಲ್ಲಿ ಪಂಜಾಬಿನ ಯೂದ್ಧವೀರ್ ಅವರು ಕೇವಲ ಎರಡೇ ನಿಮಿಷದಲ್ಲಿ ಪ್ರತಿಸ್ಪರ್ಧಿ ಚಂದ್ರಹಾಸ ಪಾಟೀಲ ಅವರನ್ನು ಮಣಿಸಿ ಮೂರನೇ ಬಹುಮಾನ ಪಡೆದುಕೊಂಡರು.
ಸಂಭಾಜಿ ಸುಡಕೆ, ಶಿವಾನಂದ ಚವ್ಹಾಣ, ಪ್ರಕಾಶ ಈರಗಾರ, ಬೀರಪ್ಪ ಚಿಂಚಲಿ, ಇಬ್ರಾಹಿಂ ಬನ್ನಟ್ಟಿ, ರಾಜು ವಡ್ಡರ, ಸಂಭಾ ಹಾರೂಗೇರಿ, ಸ್ವಪ್ನಿಲ್ ಕೊರವಿ ಸೇರಿದಂತೆ ಸುಮಾರು 32 ಜೋಡಿ ಹೆಸರಾಂತ ಮಲ್ಲರ ಕುಸ್ತಿ ಪಂದ್ಯಗಳು ನಡೆದವು.
ಹಿಂದಕೇಸರಿ ಶ್ರೀಪತಿ ಖಂಚನಾಳೆ, ಗಣಪತರಾವ ಆಂದಳಕರ, ದಿನಾನಾಥಸಿಂಗ್ ಹಾಗೂ ವಿವಿಧ ಮಠಾಧೀಶರು ಬಹುಮಾನ ವಿತರಿಸಿದರು.