ಬೆಂಗಳೂರು: ಅಕ್ರಮವಾಗಿ ಅಳವಡಿಸಿಕೊಂಡಿರುವ ನೀರಾವರಿ ಪಂಪ್ಸೆಟ್ಗಳನ್ನು ಸಕ್ರಮಗೊಳಿಸುವ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಗುರುವಾರ ವಿಧಾನಸಭೆಗೆ ತಿಳಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, `ಅಕ್ರಮ ಪಂಪ್ಸೆಟ್ಗಳಿಂದಾಗಿ ವಿದ್ಯುತ್ ಕೊರತೆ ಉಲ್ಬಣವಾಗಿದೆ. ಎಲ್ಲ ಪಂಪ್ಸೆಟ್ಗಳನ್ನೂ ಸಕ್ರಮ ಮಾಡಿದರೆ ವಿದ್ಯುತ್ ಕೊರತೆಯ ಸ್ಪಷ್ಟ ಚಿತ್ರಣ ಸಿಗುತ್ತದೆ. ಪಂಪ್ಗಳ ವಿದ್ಯುತ್ ಸಂಪರ್ಕ ಸಕ್ರಮಗೊಳಿಸಲು ನೀಡಿದ್ದ ಗಡುವನ್ನು ಮಾ.31ರವರೆಗೂ ವಿಸ್ತರಿಸಲಾಗುವುದು~ ಎಂದರು.
ರಾಜ್ಯಪಾಲರಿಂದ ಅಡ್ಡಿ
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 105 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡುವ ಪ್ರಸ್ತಾವವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ರಾಜ್ಯಪಾಲರು ಒಪ್ಪಿಗೆ ನೀಡುವವರೆಗೂ ಬಿಡುಗಡೆ ಅಸಾಧ್ಯ ಎಂದು ಬಂದಿಖಾನೆ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದರು.
ಬಿಜೆಪಿ ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, `ಮೊದಲು 493 ಕೈದಿಗಳ ಬಿಡುಗಡೆಗೆ ಪಟ್ಟಿ ಕಳುಹಿಸಲಾಗಿತ್ತು. ಅದನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ನಂತರ 10 ಕೈದಿಗಳ ಬಿಡುಗಡೆ ಪ್ರಸ್ತಾವ ಸಲ್ಲಿಸಲಾಯಿತು. ಮೂರು ತಿಂಗಳಾದರೂ ರಾಜ್ಯಪಾಲರಿಂದ ಯಾವುದೇ ಉತ್ತರ ಬಂದಿಲ್ಲ~ ಎಂದರು.
ಪ್ರಶ್ನೆ ಕೇಳುವಾಗ ತಮ್ಮದೇ ಪಕ್ಷದ ನಾಯಕರು, ಶಾಸಕರನ್ನು ಅಣಕಿಸಿದ ಶಂಕರಲಿಂಗೇಗೌಡ ಅವರು, `ಇಲ್ಲಿರುವ ನಾವು ಜನರ ಕೈದಿಗಳು. ನಮ್ಮಲ್ಲಿ ಕೆಲವರು ಈಗಾಗಲೇ ಜೈಲಿಗೆ ಹೋಗಿ ಅಲ್ಲಿನ ಕಷ್ಟ ನೋಡಿಕೊಂಡು ಬಂದಿದ್ದಾರೆ. ದರೋಡೆಕೋರರು ಹೊರಗಿರುವಾಗ ಸಣ್ಣ ತಪ್ಪು ಮಾಡಿ ಜೈಲಿಗೆ ಹೋಗಿರುವವರನ್ನು ಬಿಡುಗಡೆ ಮಾಡದಿರುವುದು ತಪ್ಪಲ್ಲವೇ~ ಎಂದು ಪ್ರಶ್ನಿಸಿದರು.