ರೋಣ: ರೋಣ ತಾಲ್ಲೂಕಿನಾದ್ಯಂತ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸುತ್ತೇನೆ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರು ಕಾರ್ಯಕರ್ತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಲಾಗುವುದು ಎಂದು ರಾಜ್ಯ ಯುವ ಜೆಡಿಎಸ್ ಉಪಾಧ್ಯಕ್ಷ ಡಾ.ಮಂಜುನಾಥ ವಿಶ್ವಬ್ರಾಹ್ಮಣ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದ ರಾಮಣ್ಣ ಸಕ್ರೋಜಿ, ಶರಣಪ್ಪ ರೇವಡಿ, ಹಾಗೂ ಉಮೇಶ ಮಲ್ಲಾಪುರ ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಬಂದವರು. ನಾನು ಪಕ್ಷದ ಪ್ರಾರಂಭದಿಂದಲೂ ಇದ್ದೇನೆ. ರೋಣ ಮತಕ್ಷೇತ್ರದ ವಿಧಾನಸಭೆಯ ಚುನಾವಣಿಗೂ ಸಹ ಸ್ಪರ್ಧಿಸಿರುವಂತಹ ಅಭ್ಯರ್ಥಿಯಾಗಿದ್ದನೆ. ಈಗ ಬಂದವರು ನನ್ನ ಬಗ್ಗೆ ಮತ್ತು ನಮ್ಮ ಜೆಡಿಎಸ್ ಪಕ್ಷದ ಸಂಘಟನೆಯ ಬಗ್ಗೆ ಮಾತನಾಡುವುದು ಅವರಿಗೆ ನೈತಿಕ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಪದಾಧಿಕಾರಿಗಳನ್ನಾಗಿ ಮಾಡಿದ್ದು ಯಾರು ಎಂಬುದನ್ನು ದಾಖಲೆಗಳ ಸಮೇತ ಬಿಡುಗಡೆ ಮಾಡಲಿ ನಿಜವಾದ ಕಾರ್ಯಕರ್ತರ ಬಣ್ಣ ಬಯಲಾಗುತ್ತದೆ ಎಂದರು.
ಪಕ್ಷದ ವರಿಷ್ಠರಾದ ಬಾಂಬೆ ಕರ್ನಾಟಕ ಕೋರ ಕಮಿಟಿಯ ಅಧ್ಯಕ್ಷರಾದ ಎ.ಬಿ.ಪಾಟೀಲ, ಬಸವರಾಜ ಹೊರಟ್ಟಿ, ಬಸನಗೌಡ ಪಾಟೀಲ ಯತ್ನಾಳ ಮುಂತಾದವರ ಸೂಚನೆಯ ಮೇರೆಗೆ ರೋಣ ತಾಲ್ಲೂಕಿನಾದ್ಯಾಂತ ಜೆಡಿಎಸ್ ಪಕ್ಷವನ್ನು ಪುನರ್ ಸಂಘಟಿಸಿ ಬಲಪಡಿಸುವುದಾಗಿ ಹೇಳಿದರು. ಮಾಜಿ ಅಧ್ಯಕ್ಷ ಮಾಹಾದೇವಪ್ಪ ನವಲಗುಂದ ಮಾತನಾಡಿ ಹಿಂದಿನ ಜಲ್ಲಾ ಅಧ್ಯಕ್ಷ ರವಿ ದಂಡಿನ ಪಕ್ಷದ ಸಂಘಟನೆ ಮಾಡದೆ ಕೇವಲ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಮರೇಶ ಬೂದಿಹಾಳ, ಮೈಲಾರಪ್ಪ ದೇಶಣ್ಣವರ, ದೊಡ್ಡಬಸಪ್ಪ ನವಲಗುಂದ ಬಸವನಗೌಡ ಜಕ್ಕನಗೌಡ್ರ, ವಿ.ಎಸ್.ಶಿರೋಳ, ವೀರಯ್ಯ ಗಂಟಿಮಠ, ನಿಂಗಪ್ಪ ನವಲಗುಂದ, ರಮೇಶ ತಳವಾರ, ಬಾಳು ಗುಳೇದ, ಮಹಾದೇವಪ್ಪ ನವಲಗುಂದ ಮುಂತಾದವರು ಉಪಸ್ಥಿತರಿದ್ದರು.