ಸಾಗರ: ತಾಲ್ಲೂಕಿನ ಕಾರ್ಗಲ್-ಜೋಗ್ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಸುರೇಶ್ ಅವರು ಆಡಳಿತದಲ್ಲಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಅವರ ವಿರುದ್ಧ ಸೂಕ್ತ ತನಿಖೆ ಆಗಬೇಕು ಎಂದು ಪಟ್ಟಣ ಪಂಚಾಯ್ತಿ ಸದಸ್ಯ ರವಿ ಲಿಂಗನಮಕ್ಕಿ ಆಗ್ರಹಿಸಿದರು.
ಪಟ್ಟಣ ಪಂಚಾಯ್ತಿಯ ಸಭೆಯಲ್ಲಿ ಒಮ್ಮೆ ತೀರ್ಮಾನವಾಗಿ ನಂತರದ ಸಭೆಯಲ್ಲಿ ಸ್ಥೀರಿಕರಿಸಲ್ಪಟ್ಟ ವಿಷಯವನ್ನು ಮತ್ತೆ ಮುಂದಿನ ಸಭೆಯ ವಿಷಯ ಸೂಚಿಯಲ್ಲಿ ತರುವ ಮೂಲಕ ಮುಖ್ಯಾಧಿಕಾರಿಗಳು ಕಾನೂನಿನ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಜೂನ್ ತಿಂಗಳಲ್ಲಿ ನಡೆದ ಪಂಚಾಯ್ತಿಯ ವಿಶೇಷ ಸಾಮಾನ್ಯ ಸಭೆಯಲ್ಲಿ ಶೇ 22.75ರ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಿ ಆ ಪಟ್ಟಿಯನ್ನು ಸಭೆ ಸರ್ವಾನುಮತದಿಂದ ಅನುಮೋದಿಸಿತ್ತು. ನಂತರ ಆಗಸ್ಟ್ ತಿಂಗಳಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ಸ್ಥೀರಿಕರಿಸಲಾಗಿತ್ತು. ಇದೇ ವಿಷಯವನ್ನು ಅ. 4ರಂದು ನಡೆಯಲಿರುವ ಸಭೆಯ ವಿಷಯ ಸೂಚಿಗೆ ಮತ್ತೊಮ್ಮೆ ಸೇರಿಸುವ ಮೂಲಕ ಮುಖ್ಯಾಧಿಕಾರಿ ಜನಪ್ರತಿನಿಧಿಗಳಿಗೆ ಅಗೌರವ ಸೂಚಿಸಿದ್ದಾರೆ ಎಂದು ದೂರಿದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷರ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗಳು ಶೇ 22.75 ಯೋಜನೆಯ ಫಲಾನುಭವಿಗಳ ಪಟ್ಟಿ ಬದಲಿಸುವ ದುರುದ್ದೇಶದಿಂದಲೆ ಮತ್ತೊಮ್ಮೆ ಈ ವಿಷಯವನ್ನು ಸಭೆಗೆ ತಂದಿದ್ದಾರೆ. ತನ್ಮೂಲಕ ಮುಖ್ಯಾಧಿಕಾರಿ ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಪ.ಪಂ. ಸದಸ್ಯ ರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹೊಳಿಯಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ್ ಗಾಳಿಪುರ ಹಾಜರಿದ್ದರು.