ಗೌರಿಬಿದನೂರು: ಪಟ್ಟಣವನ್ನು ಶುಚಿಯಾಗಿಟ್ಟುಕೊಳ್ಳುವುದು ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಬರೀ ಪುರಸಭೆ ಕಾರ್ಮಿಕರ ಕರ್ತವ್ಯವಲ್ಲ, ಪಟ್ಟಣದಲ್ಲಿ ವಾಸಿಸುವ ಪ್ರತಿಯೊಬ್ಬರ ಕರ್ತವ್ಯ ಎಂದು ತಹಶೀಲ್ದಾರ್ ಡಾ. ಎನ್.ಭಾಸ್ಕರ್ ತಿಳಿಸಿದರು.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತಿರೋ, ಅಷ್ಟೇ ಶುದ್ಧವಾಗಿ ಇಡೀ ಪಟ್ಟಣ ಇಟ್ಟುಕೊಳ್ಳಬೇಕು. ಆಗ ಮಾತ್ರವೇ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಸದಾ ಗಲೀಜಿನಲ್ಲಿಯೇ ಕೆಲಸ ಮಾಡುವ ಪೌರಕಾರ್ಮಿಕರು ಅವರು ಹಲವು ಬಾರಿ ಅನಾರೋಗ್ಯಕ್ಕೀಡಾಗುತ್ತಾರೆ. ಆರೋಗ್ಯ ರಕ್ಷಣೆಗಾಗಿ ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಬೇಕು ಎಂದು ಒತ್ತಿ ಹೇಳಿದರು.
ಪುರಸಭೆ ಸದಸ್ಯ ಜಿ.ಬಾಲಾಜಿ ಮಾತನಾಡಿದರು. ಉತ್ತಮ ಸೇವೆ ಸಲ್ಲಿಸಿದ ಪುರಸಭೆ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೌರಕಾರ್ಮಿಕರ ಮರವಣಿಗೆ ನಡೆಯಿತು.
ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಪುರಸಭೆ ಸದಸ್ಯರಾದ ವಿ.ರಮೇಶ್,ಅನಂತ್ರಾಜು, ಮೋಹನ್,ಚಿದಾನಂದಗುಪ್ತ, ಪುರಸಭೆ ಪೌರಕಾರ್ಮಿಕರ ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ, ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಪುರಸಭೆ ಎಂಜಿನಿಯರ್ಗಳಾದ ತಿಮ್ಮರಾಜು, ತ್ಯಾಗರಾಜ್, ಕಚೇರಿ ಸಿಬ್ಬಂದಿ ಅಮರನಾರಾಯಣ ಉಪಸ್ಥಿತರಿದ್ದರು.
ಸಾಲ ಪಾವತಿಗೆ ಮನವಿ
ಬಂಗಾರಪೇಟೆ: ಸಕಾಲಕ್ಕೆ ಸಾಲ ಪಾವತಿಸುವ ಮೂಲಕ ರೈತರು ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹುನ್ಕುಂದ ವೆಂಕಟೇಶ್ ಹೇಳಿದರು. ಪಟ್ಟಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.