ಸೋಮವಾರಪೇಟೆ: ಪಟ್ಟಣದ ಬದುಕಿನತ್ತ ಆಕರ್ಷಿತರಾಗುವ ಯುವಜನರು ಅನಗತ್ಯವಾಗಿ ವಲಸೆ ಹೋಗುತ್ತಿದ್ದಾರೆ. ಇದರಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ಯುವಕ, ಯುವತಿ ಮಂಡಳಿಗಳು ನಿಷ್ಕ್ರಿಯವಾಗಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದು ತಾಲ್ಲೂಕು ಯುವ ಒಕ್ಕೂಟದ ಸ್ಥಾಪಕಾಧ್ಯಕ್ಷ ಕೆ.ಸಿ.ಉದಯಕುಮಾರ್ ಅಭಿಪ್ರಾಯಪಟ್ಟರು.
ನೆಹರು ಯುವಕೇಂದ್ರ, ಜಿಲ್ಲಾ ಹಾಗೂ ತಾಲ್ಲೂಕು ಯುವ ಒಕ್ಕೂಟಗಳ ಆಶ್ರಯದಲ್ಲಿ ಬುಧವಾರ ಆರಂಭಗೊಂಡ 5 ದಿನಗಳ ಯುವ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಕಳಕಳಿ ಮತ್ತು ಸೇವಾ ಭಾವನೆಯನ್ನು ಯುವಕರು ರೂಢಿ ಸಿಕೊಳ್ಳಬೇಕೆಂದರು.
ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಚಾಮೇರ ದಿನೇಶ್ ಮಾತನಾಡಿ, ಯುವಕರಲ್ಲಿ ನಾಯಕತ್ವದ ಗುಣ ಬೆಳೆಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಜನಾಂಗವು ಭಯೋತ್ಪಾದನೆಯ ನಿಗ್ರಹಕ್ಕೆ ಪಣತೊಟ್ಟು ದುಶ್ಚಟಗಳಿಂದ ವಿಮುಕ್ತರಾಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ.ಲೋಕೇಶ್ ಮಾತನಾಡಿ, ಯುವಕರ ಕ್ರಿಯಾಶೀಲತೆ ಹೆಚ್ಚಿಸಲು ಯುವ ಒಕ್ಕೂಟದಂತಹ ವೇದಿಕೆ ಅವಶ್ಯ ಎಂದರು.
ರಾಷ್ಟ್ರೀಯ ಸೇವಾ ಕಾರ್ಯಕರ್ತೆ ಎಸ್.ಎಸ್.ಪ್ರಿಯಾ, ಜಿಲ್ಲಾ ಯುವ ಒಕ್ಕೂಟದ ಉಪಾಧ್ಯಕ್ಷ ಎಂ.ಪಿ.ರವಿ, ಎ.ಎಸ್.ಸುರೇಶ್, ಬಿ.ಎನ್.ಶಾಂತಪ್ಪ ಉಪಸ್ಥಿತರಿದ್ದರು.